ಗುಂಡ್ಲುಪೇಟೆ: ದೀಪಾವಳಿ ಎಂದರೆ ಬೆಳಕಿನ ಹಬ್ಬ, ಎಲ್ಲೆಲ್ಲೂ ಪಟಾಕಿ ಶಬ್ದ, ದೇವಸ್ಥಾನಗಳಲ್ಲಿ ದೀಪಾಲಂಕಾರ ನಡೆಯುತ್ತದೆ. ಆದರೆ, ತಾಲ್ಲೂಕಿನ ಈ ಏಳು ಗ್ರಾಮಗಳಲ್ಲಿ ಬಲಿ ಪಾಡ್ಯಮಿ ಬುಧವಾರ ಬಂದರಷ್ಟೇ ಆಚರಣೆ ಮಾಡುತ್ತಾರೆ. ಬೇರೆ ಯಾವ ದಿನ ಹಬ್ಬ ಬಿದ್ದರೆ ನಂತರದ ಬುಧವಾರ ಆಚರಿಸುತ್ತಾರೆ.
ತಾಲ್ಲೂಕಿನ ನಲ್ಲೂರೇಳು ಗ್ರಾಮ ಎಂದು ಕರೆಯಲಾಗುವ ನೆನೆಕಟ್ಟೆ, ಮಳವಳ್ಳಿ, ಮಾಡ್ರಹಳ್ಳಿ, ವೀರನಪುರ, ಬನ್ನಿತಾಳಪುರ, ಇಂಗಲವಾಡಿ, ಬೆಂಡಗಳ್ಳಿ ಗ್ರಾಮದಲ್ಲಿ ಈ ಸಂಪ್ರದಾಯ ಜಾರಿಯಲ್ಲಿದೆ.
‘ದೀಪಾವಳಿ ಮಾತ್ರ ಅಲ್ಲ, ಯುಗಾದಿ ಹಬ್ಬವೂ ಇಲ್ಲಿ ಬುಧವಾರವೇ ಬರಬೇಕು. ಬೇರೆ ದಿನ ಬಂದರೆ ಹಬ್ಬ ಆಚರಣೆಗೆ ನಂತರದ ಬುಧವಾರದ ವರೆಗೆ ಕಾಯುತ್ತೇವೆ’ ಎಂದು ಮಾಡ್ರಹಳ್ಳಿ ಗ್ರಾಮದ ರೈತ ಮುಖಂಡ ಮಹದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಗ್ರಾಮದಲ್ಲಿ ಹಿಂದಿನ ತಲೆಮಾರಿನವರಿಗೆ ಸಾಂಕ್ರಾಮಿಕ ರೋಗ ಗ್ರಾಮದಲ್ಲಿ ಹರಡಿದ್ದ ಸಂದರ್ಭದಲ್ಲಿ ಬುಧವಾರ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ ಎಂದು ಹರಕೆ ಹೊತ್ತಿದ್ದರಿಂದ ಕಾಯಿಲೆ ವಾಸಿಯಾಗಿತ್ತಂತೆ, ಅಂದಿನಿಂದ ಇಂದಿನವರೆಗೂ ಹಿಂದಿನ ಪದ್ದತಿಯನ್ನು ಏಳೂರು ಗ್ರಾಮದ ಜನರು ಅಳವಡಿಸಿಕೊಂಡು ಪಾಲನೆ ಮಾಡುತ್ತಿದ್ದಾರೆ’ ಎಂದು ಗ್ರಾಮದ ಚಿಂತಕ ಚಿದಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.
ಬೇರೆ ದಿನಗಳಲ್ಲಿ ಬಂದ ಹಬ್ಬಗಳನ್ನು ಆಚರಣೆ ಮಾಡಿದರೆ ಏನಾದರೂ ಕೆಡಕಾಗಬಹುದು, ಜಾನುವಾರುಗಳಿಗೆ ತೊಂದರೆ ಆಗಬಹುದು ಎಂಬ ಆತಂಕ ಜನರದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.