ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ‘ಕೋಟೆ’ಯಲ್ಲಿ ‘ಕಮಲ’ ಅರಳಿಸಿದ್ದ ಶ್ರೀನಿವಾಸ ಪ್ರಸಾದ್

ಸಿದ್ದರಾಮಯ್ಯ, ಕಾಂಗ್ರೆಸ್‌ ಜೊತೆ ಮುನಿಸಿಕೊಂಡು ಬಿಜೆಪಿ ಸೇರಿದ್ದ ರಾಜಕಾರಣಿ
Published 30 ಏಪ್ರಿಲ್ 2024, 6:49 IST
Last Updated 30 ಏಪ್ರಿಲ್ 2024, 6:49 IST
ಅಕ್ಷರ ಗಾತ್ರ

ಚಾಮರಾಜನಗರ: ಹಳೆ ಮೈಸೂರು ಭಾಗದ ಪ್ರಭಾವಿ ‘ದಲಿತ ನಾಯಕ’ರಾಗಿದ್ದ ಶ್ರೀನಿವಾಸ ಪ್ರಸಾದ್ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಕಾಂಗ್ರೆಸ್‌ ಭದ್ರಕೋಟೆ ಎನಿಸಿದ್ದ ಕ್ಷೇತ್ರದಲ್ಲಿ ಮೊದಲ ಬಾರಿಗೆ ‘ಕಮಲ’ ಅರಳುವಂತೆ ಮಾಡಿದ್ದರು.

2017ರಲ್ಲಿ ತಮ್ಮನ್ನು ಏಕಾಏಕಿ ಸಚಿವ ಸ್ಥಾನದಿಂದ ತೆಗೆದಿದ್ದಕ್ಕೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮೇಲೆ ಮುನಿಸಿಕೊಂಡಿದ್ದ ಅವರು, ‘ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ’ ಎಂದು ಕಾಂಗ್ರೆಸ್ ತೊರೆದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು. ಆ ನಂತರ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಕಂಡಿದ್ದರು.

2019ರ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ತಮ್ಮ ‘ಸ್ವಾಭಿಮಾನ’ವನ್ನು ಮತ್ತೆ ಪಣಕ್ಕಿಟ್ಟು, ಕಾಂಗ್ರೆಸ್‌ನ ಆರ್.ಧ್ರುವನಾರಾಯಣ ಅವರ ವಿರುದ್ಧ ರೋಚಕವಾಗಿ (1,817 ಮತಗಳ ಅಂತರ) ಗೆಲುವು ಸಾಧಿಸಿದ್ದರು. ಗೆಲುವಿನ ಬಳಿಕ ಹಳೆ ಮೈಸೂರು ಭಾಗದಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದರು.

1974ರಲ್ಲಿ ಚುನಾವಣಾ ರಾಜಕೀಯ ಪ್ರವೇಶಿಸಿದ್ದ ಶ್ರೀನಿವಾಸ ಪ್ರಸಾದ್‌ ಅವರು ಆರು ಬಾರಿ ಚಾಮರಾಜನಗರದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೇಂದ್ರದ ಅಟಲ್‌ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿ, ಎರಡು ಬಾರಿ ನಂಜನಗೂಡು ಶಾಸಕರಾಗಿ, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಐದು ದಶಕಗಳ ರಾಜಕೀಯ ಅನುಭವ ಹೊಂದಿದ್ದರು.

ಕೊನೆ ಕ್ಷಣದಲ್ಲಿ ಸ್ಪರ್ಧೆ: 2017ರ ನಂಜನಗೂಡಿನ ಉಪ ಚುನಾವಣೆ ಸೋಲಿನ ನಂತರ ಚುನಾವಣಾ ರಾಜಕೀಯದಿಂದ ಪ್ರಸಾದ್‌ ದೂರವಾಗಿದ್ದರು. ವಯಸ್ಸು ಹಾಗೂ ಅನಾರೋಗ್ಯ ಕಾರಣದಿಂದ ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದೂ ಹೇಳಿದ್ದರು. 2018ರಲ್ಲಿ ನಂಜನಗೂಡು ಕ್ಷೇತ್ರದಲ್ಲಿ ಅಳಿಯ ಹರ್ಷವರ್ಧನ್‌ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದರು.

‘2019 ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ನಾನು ಹೇಳುವ ಅಭ್ಯರ್ಥಿಗೆ ಟಿಕೆಟ್‌ ಕೊಡಿ, ಗೆಲ್ಲಿಸುತ್ತೇನೆ’ ಎಂದು ಹೇಳುತ್ತಿದ್ದ ಅವರು, ಆರಂಭದಲ್ಲಿ ಸ್ಪರ್ಧಿಸಿರುವ ಆಶಯ ವ್ಯಕ್ತಪಡಿಸಿರಲಿಲ್ಲ. 

ಆದರೆ, ಜಿಲ್ಲೆಯ ಬಿಜೆಪಿ ಮುಖಂಡರ ಒತ್ತಾಯದ ಮೇರೆಗೆ ಕೊನೆ ಕ್ಷಣದಲ್ಲಿ ಅಭ್ಯರ್ಥಿಯಾಗಲು ಒಪ್ಪುವ ಮೂಲಕ ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳಿಗೆ ಅಚ್ಚರಿ ಮೂಡಿಸಿದ್ದರು. ಎರಡು ದಶಕಗಳ ಬಳಿಕ ಅವರು ಲೋಕಸಭೆಗೆ ಸ್ಪರ್ಧಿಸಿದ್ದರು. 

ಮೋದಿ ಅಲೆ, ತಮ್ಮ ವರ್ಚಸ್ಸಿನ ಪ್ರಭಾವದಲ್ಲಿ ಗೆಲುವಿನ ದಡ ಸೇರಲು ಯಶಸ್ವಿಯಾಗಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್‌ ಅವರ ಕಿರಿಯ ಅಳಿಯ ಡಾ.ಎನ್‌.ಎಸ್‌ಮೋಹನ್‌ ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ, ಅವರಿಗೆ ಟಿಕೆಟ್‌ ಸಿಕ್ಕಿರಲಿಲ್ಲ. 

ಆ ಬಳಿಕ ಅವರ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಆದರೆ, ರಾಜಕೀಯದಿಂದ ನಿವೃತ್ತಿಯಾಗಿದ್ದರಿಂದ ಪ್ರಸಾದ್‌ ಅವರು ತಮ್ಮ ನಿಲುವನ್ನು ಬಹಿರಂಗ ಪಡಿಸಿರಲಿಲ್ಲ.

ಕಾಡಿದ ಅನಾರೋಗ್ಯ, ಕ್ಷೇತ್ರಕ್ಕೆ ಹಿನ್ನಡೆ
ಅನಾರೋಗ್ಯ ಕಾಡುತ್ತಿದ್ದ ಕಾರಣಕ್ಕೆ ಶ್ರೀನಿವಾಸ ಪ್ರಸಾದ್‌ ಅವರಿಗೆ ಸಂಸದರಾಗಿ ಐದು ವರ್ಷಗಳ ಕಾಲ ಸಕ್ರಿಯವಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಎರಡು ವರ್ಷಗಳ ಕಾಲ ಕೋವಿಡ್‌ ಹಾವಳಿಯ ಕಾರಣಕ್ಕೂ ಅವರಿಗೆ ಓಡಾಡಲು ಸಾಧ್ಯವಾಗಿಲ್ಲ.  ಸಂಸತ್ ಅಧಿವೇಶನಗಳು ಕ್ಷೇತ್ರದಲ್ಲಿ ನಡೆಯುವ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದೂ ಕಡಿಮೆ. ದಿಶಾ ಸಭೆಗಳೂ ನಿಗದಿಯಂತೆ ನಡೆದಿರಲಿಲ್ಲ. ಕೇಂದ್ರ ಸರ್ಕಾರ ಅಲಿಂಕೊ ನೆರವಿನಿಂದ ಕ್ಷೇತ್ರ ವ್ಯಾಪ್ತಿಯ ಅಂಗವಿಕಲರಿಗೆ ಹಿರಿಯ ನಾಗರಿಕರಿಗೆ ಸಲಕರಣೆಗಳನ್ನು ವಿತರಿಸಿದ್ದು ಈ ಐದು ವರ್ಷಗಳ ಅವಧಿಯಲ್ಲಿ ನಡೆದ ದೊಡ್ಡ ಕಾರ್ಯಕ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT