ಚಾಮರಾಜನಗರ: ‘ರಾಜ್ಯದಲ್ಲಿ ಓಮೈಕ್ರಾನ್ ವೈರಸ್ ಹರಡುತ್ತಿದ್ದು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ಕಾಲೇಜುಗಳನ್ನು ಬಂದ್ ಮಾಡಬೇಕು’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.
ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಬೆಂಬಲಿಗರೊಂದಿಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಕೊರೊನಾ ವೈರಸ್ನ ರೂಪಾಂತರ ತಳಿ ಓಮೈಕ್ರಾನ್ ಹರಡುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತೀರ್ಮಾನ ಕೈಗೊಳ್ಳಬೇಕು. ಹೊಸ ವೈರಸ್ ಹೆಚ್ಚು ತೀವ್ರತೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಎಚ್ಚರ ವಹಿಸಬೇಕಾಗಿದ್ದು ಆದ್ಯ ಕರ್ತವ್ಯ’ ಎಂದರು.
‘18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಲಸಿಕೆ ಹಾಕಿಸಿಕೊಂಡಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಇನ್ನೂ ಹಾಕಿಸಿಕೊಂಡಿಲ್ಲ. ಅವರಿಗೂ ಲಸಿಕೆ ಕೊಡಲು ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು.ಲಸಿಕೆ ಹಾಕದೇ ಶಾಲೆ ಆರಂಭಿಸಿದ್ದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲಾಕ್ಡೌನ್ ಬೇಡ: ‘ಲಾಕ್ಡೌನ್ ಬಡವರ ವಿರೋಧಿ. ಮತ್ತೊಮ್ಮೆ ಜಾರಿ ಮಾಡಿದರೆ ಜನರು ತೊಂದರೆಗೆ ಸಿಲುಕುತ್ತಾರೆ. ಹಾಗಾಗಿ, ಯಾವುದೇ ಕಾರಣಕ್ಕೂ ಹೇರಬಾರದು’ ಎಂದು ವಾಟಾಳ್ ನಾಗರಾಜ್ ಅವರು ಆಗ್ರಹಿಸಿದರು.
ಚಾ.ರಂ.ಶ್ರೀನಿವಾಸಗೌಡ, ಶಿವಲಿಂಗಮೂರ್ತಿ, ಹರೀಶ್, ಪಾರ್ಥಸಾರಥಿ, ರಾಮ್, ವರದನಾಯಕ, ಶಿವಶಂಕರ್ ನಾಯಕ, ಸಾಗರ್ ಸಾವತ್ ಇತರರು ಇದ್ದರು.
‘ಹಣದ ದಂಧೆ ತಡೆಗೆ ಆಯೋಗ ವಿಫಲ’
‘ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲ ಪಕ್ಷಗಳೂ ಶ್ರೀಮಂತರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದ್ದಾರೆ. ಇತಿಹಾಸ ಇಲ್ಲದವರನ್ನು ಮೇಲ್ಮನೆಗೆ ಆಯ್ಕೆ ಮಾಡಲು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಹೊರಟಿದೆ. ಒಂದು ಮತಕ್ಕೆ ಲಕ್ಷ ರೂಪಾಯಿವರೆಗೆ ನಡೆಯುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ವಾಟಾಳ್ ನಾಗರಾಜ್ ಹೇಳಿದರು.
‘ರಾಜ್ಯದ 25 ಕ್ಷೇತ್ರಗಳಲ್ಲೂ ₹ 3 ಕೋಟಿಗೂ ಹೆಚ್ಚಿನ ಅಕ್ರಮ ನಡೆಯುತ್ತಿದೆ. ಇದನ್ನು ತಡೆಯುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ. ವಿಧಾನ ಪರಿಷತ್ ಕಲುಷಿತವಾಗಬಾರದು ಎಂದಿದ್ದರೆ ಹಣದ ಹೆಸರಿನಲ್ಲಿ ನಡೆಯುತ್ತಿರುವ ದಂಧೆಯನ್ನು ತಡೆಯಲು ಆಯೋಗ ಸಜ್ಜಾಗಬೇಕು’ ಎಂದರು.