ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಿಡ ಮರಗಳ ಪೋಷಣೆ: ಪರಿಸರ ಸಂರಕ್ಷಣೆಯ ಘೋಷಣೆ

ಜಿಲ್ಲೆಯಾದ್ಯಂತ ವಿಶ್ವ ಪರಿಸರ ದಿನಾಚರಣೆ, ಗಿಡ ನೆಟ್ಟು ಜಾಗೃತಿ ಸಂದೇಶ ಸಾರಿದ ಗಣ್ಯರು
Published 5 ಜೂನ್ 2024, 16:27 IST
Last Updated 5 ಜೂನ್ 2024, 16:27 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಬುಧವಾರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳ ವತಿಯಿಂದ ನಡೆದ ಕಾರ್ಯಕ್ರಮಗಳಲ್ಲಿ ಗಿಡಗಳನ್ನು ನೆಟ್ಟು, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. 

ಈಶ್ವರಿ ಸೋಷಿಯಲ್‌ ಟ್ರಸ್ಟ್‌: ನಗರದ ಕರಿನಂಜನಪುರ ಸಮೀಪದ ಮಾದರಿ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯ ಮುಂಭಾಗ ರಸ್ತೆಗೆ ಈಶ್ವರಿ ಸೋಶಿಯಲ್ ಟ್ರಸ್ಟ್ ವತಿಯಿಂದ ಸಾಲು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾ ಮಕ್ಕಳ ಸ್ನೇಹಿ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಚ್.ಜೆ.ಕೃಷ್ಣ ಚಾಲನೆ ನೀಡಿದರು. 

ನಂತರ ಮಾತನಾಡಿದ ಅವರು, ‘ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ತೋರಬೇಕು. ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಉಷ್ಣಾಂಶವನ್ನು ಕಡಿಮೆ ಮಾಡಬೇಕಾದರೆ ಹೆಚ್ಚು ಗಿಡ, ಮರಗಳನ್ನು ಬೆಳೆಸಬೇಕು’ ಎಂದರು. 

ಈಶ್ವರಿ ಸೋಶಿಯಲ್ ಟ್ರಸ್ಟ್ ಸಂಸ್ಥಾಪಕ ಹಾಗೂ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ ಮಾತನಾಡಿ,  ‘ಜಿಲ್ಲೆಯಲ್ಲಿ 12 ಸಾವಿರಕ್ಕೂ ಗಿಡಗಳನ್ನು ನಮ್ಮ ಟ್ರಸ್ಟ್ ವತಿಯಿಂದ ನೆಟ್ಟು ಪೋಷಣೆ ಮಾಡಲಾಗುತ್ತಿದೆ. ಪರಸರ ಸಂರಕ್ಷಣೆ ಕಾರ್ಯವು ನಿತ್ಯ ನಿರಂತರವಾಗಿ ಎಂಟು ವರ್ಷಗಳಿಂದ ಸಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಮಾತನಾಡಿದರು. ಚಾಮರಾಜನಗರ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಶ್ವನಾಥ್, ವಿಸ್ತಾಣಾಧಿಕಾರಿ ಲಿಂಗರಾಜು, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿಯರಾದ ಶಿಲ್ಪ ಹಾಗೂ ಶಾಲಿನಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. 

ಶ್ರೀರಾಮಚಂದ್ರ ಶಾಲೆ: ನಗರದ ನ್ಯಾಯಾಲಯದ ರಸ್ತೆಯಲ್ಲಿರುವ ಶ್ರೀರಾಮ ವಿದ್ಯಾಸಂಸ್ಥೆಯ ಆವರಣದಲ್ಲಿ ಗಿಡ ನೆಟ್ಟು ಮಾತನಾಡಿದ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಎಸ್‌.ಮಾದಯ್ಯ, ‘ಪರಿಸರದ ರಕ್ಷಣೆಯಿಂದ ಸುತ್ತಮುತ್ತಲಿನ ವಾತಾವರಣ ಶುದ್ಧವಾಗುತ್ತದೆ. ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು, ಪೋಷಿಸಲು ಆಸಕ್ತಿ ತೋರಬೇಕು’ ಎಂದರು. 

ಸಂಸ್ಥೆಯ ಕಾರ್ಯದರ್ಶಿ ಎಂ.ರುದ್ರಮೂರ್ತಿ ಮಾತನಾಡಿ. ‘ವಿದ್ಯಾರ್ಥಿಗಳು ಶಾಲೆಯ ಪರಿಸರವನ್ನು ಸ್ವಚ್ಚವಾಗಿ ಇಟ್ಟಿಕೊಳ್ಳಬೇಕು. ಒಂದು ಗಿಡವನ್ನು ದತ್ತು ಪಡೆದು ಅದನ್ನು ಪೋಷಣೆಮಾಡಬೇಕು’ ಎಂದು ಕಿವಿಮಾತು ಹೇಳಿದರು. 

ಶಾಲಾ ಮುಖ್ಯ ಶಿಕ್ಷಕಿ ರತ್ನಮ್ಮ, ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ರಂಗಸ್ವಾಮಿ, ಮಹೇಶ್, ನಾಗರಾಜು, ಯಶಪಾಲ್.ಡಿ.ಎಸ್. ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಪ್ರಜಾಪಿತ ಬ್ರಹ್ಮಾಕುಮಾರಿ ವಿವಿ: ನಗರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಸಂಜೀವಿನಿ ಟ್ರಸ್ಟ್, ಪರಿಸರ ಸಂಸ್ಕಕ್ಷಣಾ ಗತಿ ವಿಧಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪರ್ಯಾವರಣ ದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಈಶ್ವರ್‌ ಗಿಡ ನೆಟ್ಟು ನೀರೆರೆದರು. 

ಸಾಮಾಜಿಕ ಅರಣ್ಯ ವಿಭಾಗದ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಭ್ಯಶ್ರೀ ಮಾತನಾಡಿ, ‘ಪರಿಸರದ ಬಗ್ಗೆ ಜನಗಳಲ್ಲಿ ಜಾಗೃತಿ ಕಡಿಮೆ ಆಗುತ್ತಿದೆ. ಜನರು ಮರಗಳನ್ನು ಕಡಿಯುವುವಾಗ ಯೋಚನೆಯನ್ನೇ ಮಾಡುವುದಿಲ್ಲ. ಆಮ್ಲಜನಕದ ಮಹತ್ವ ಎಷ್ಟಿದೆ ಎಂದು ಕೋವಿಡ್‌ ಸಂದರ್ಭದಲ್ಲಿ ಅರಿತಿದ್ದೇವೆ’ ಎಂದರು. 

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ದಾನೇಶ್ವರಿ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರು, ಸ್ವಯಂ ಸೇವಕರು ಮತ್ತು ಚಿಂದಿ ಆಯುವವರಿಗೆ ಸಾಲು ಮರದ ತಿಮ್ಮಕ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗುಂಡ್ಲುಪೇಟೆ ಮೂಡಗೂರು ಸಿದ್ದಾನೇಶ್ವರ ವಿರಕ್ತ ಮಠದ ಇಮ್ಮಡಿ ಸ್ವಾಮೀಜಿ, ರಾಮಶೇಷ ಪಾಠಶಾಲೆಯ ಪ್ರಾಂಶುಪಾಲ ಪ್ರದೀಪ್ ಕುಮಾರ್ ದೀಕ್ಷಿತ್, ಸಂಜೀವಿನಿ ಟ್ರಸ್‌ನ ಸತೀಶ್, ವಿರಾಟ್ ಶಿವು, ಮಂಜುನಾಥ ಆರಾಧ್ಯ, ನಿರ್ಮಲ, ನಾಗು, ಶಿವಕಮಲ, ಜಯಲಕ್ಷ್ಮಿ ಭಾಗವಹಿಸಿದ್ದರು. 

‘ಕೈಗಾರಿಕೆಗಳಿಂದ ಪರಿಸರ ಹಾಳು’

ಚಾಮರಾಜನಗರ: ಕೈಗಾರಿಕೆಗಳು ಮತ್ತು ಕಾರ್ಖಾನೆಗಳಿಂದ ಹೆಚ್ಚಿನ ಮಾಲಿನ್ಯವಾಗುತ್ತಿದ್ದು ನಾವು ಉಸಿರಾಡುವ ಗಾಳಿ ಹಾಗೂ ನೀರಿನ ಗುಣಮಟ್ಟ ಹಾಳಾಗಿದೆ ಎಂದು ಯೂನಿವರ್ಸ್ ಶಾಲೆಯ ಮುಖ್ಯೋಪಾಧ್ಯಾಯಿನಿ ಎನ್. ವಿಜಯಲಕ್ಷ್ಮಿ ಬುಧವಾರ ತಿಳಿಸಿದರು. ಸೋಮವಾರಪೇಟೆಯಲ್ಲಿರುವ ಯೂನಿವರ್ಸ್ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಪರಿಸರ ಮತ್ತು ಅದನ್ನು ಸಂರಕ್ಷಿಸುವ ಅಗತ್ಯದ ಬಗ್ಗೆ ನಾವು ಜಾಗೃತಿ ಮೂಡಿಸಬೇಕಾಗಿದೆ. ಇದರಿಂದ ನಾವು ಮುಂದಿನ ಪೀಳಿಗೆ ಆರೋಗ್ಯಕರ ಪರಿಸರ ನೀಡಲು ಸಾಧ್ಯವಾಗುತ್ತದೆ’ ಎಂದರು. ‘ನಾವು ಕಸವನ್ನು ಎಲ್ಲೆಂದರಲ್ಲಿ ಹಾಕುತ್ತೇವೆ. ಇದರಿಂದಲೂ ಪರಿಸರ ಹಾಳಾಗುತ್ತದೆ. ತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡುವುದನ್ನು ಕಲಿಯಬೇಕು’ ಎಂದು ಹೇಳಿದರು.  ಶಿಕ್ಷಕಿಯರಾದ ಅಶ್ವಿನಿ ಶಕುಂತಲಾ ಶಾಲಾ ಮಕ್ಕಳು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT