ಶಿಡ್ಲಘಟ್ಟ: ‘ರಾಗಿ ಬೆಳೆಗೆ ಪರ್ಯಾಯವಾಗಿ ತೊಗರಿಯನ್ನು ಬೆಳೆಯುವ ಮೂಲಕ ರೈತರು ಆರ್ಥಿಕವಾಗಿ ಲಾಭ ಮಾಡಿಕೊಳ್ಳಬಹುದಾಗಿದೆ. ಕೃಷಿ ಇಲಾಖೆಯಲ್ಲಿ ಸಿಗುವ ಸವಲತ್ತುಗಳನ್ನು ಹಾಗೂ ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಆಹಾರವನ್ನು ಉತ್ಪಾದಿಸಬಹುದು’ ಎಂದು ಉಪಕೃಷಿ ನಿರ್ದೇಶಕ ಡಾ.ಎಂ.ಅನುರೂಪ ತಿಳಿಸಿದರು.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಎಂ.ಕೃಷ್ಣಪ್ಪ ಅವರ ತೋಟದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ನಡೆದ ತೊಗರಿಬೆಳೆ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರದ ಡಾ.ಎಂ.ಮಂಜುನಾಥ್ ಮಾತನಾಡಿ, ‘ಮಣ್ಣಿನ ಆರೋಗ್ಯವನ್ನು ಕಾಪಾಡುವುದರಿಂದ ಕೀಟ ಮತ್ತು ರೋಗಗಳ ಭಾದೆ ನಿಯಂತ್ರಿಸಿ ಗುಣಮಟ್ಟದ ಆಹಾರ ಉತ್ಪಾದಿಸಬಹುದು’ ಎಂದರು.
ಬೇಸಾಯ ಶಾಸ್ತ್ರಜ್ಞ ಡಾ.ವಿಶ್ವನಾಥ್ ಮಾತನಾಡಿ, ತೊಗರಿ ಬೆಳೆ ಬೆಳೆಯಲು ಅಂತರ ಕಾಪಾಡುವುದು, ಕುಡಿ ಚಿವುಟುವುದು, ಮುಂತಾದ ಕ್ರಮಗಳಿಂದ ಇಳುವರಿಯನ್ನು ಹೆಚ್ಚಿಸಬಹುದಾಗಿದೆ. ವೇಸ್ಟ್ ಡೀಕಂಪೋಸರ್ ಬಳಸಿ ತೊಗರಿ ಕಡ್ಡಿಗಳನ್ನು ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಬಹುದು ಎಂದರು.
ಡಾ.ವಿನೋದ, ಆತ್ಮಾ ಯೋಜನೆ ಉಪ ಯೋಜನಾ ನಿರ್ದೇಶಕ ಸತೀಶ್ ಕುಮಾರ್, ಕೃಷಿ ಅಧಿಕಾರಿಗಳಾದ ಎಂ.ಶ್ರೀನಿವಾಸ್, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಎನ್.ಅಶ್ವತ್ಥನಾರಾಯಣ, ಸಹಾಯಕ ಅಧಿಕಾರಿ ಆಶಾರಾಣಿ, ರೈತರಾದ ಗೋಪಾಲಗೌಡ, ವೆಂಕಟಸ್ವಾಮಿರೆಡ್ಡಿ ಹಾಜರಿದ್ದರು.