ಗುಡಿಬಂಡೆ: 8 ಎಕರೆ ಜಮೀನಿನಲ್ಲಿ ವಿವಿಧ ಮಿಶ್ರಬೆಳೆಗಳನ್ನು ಬೆಳೆಯುವ ಜತೆಗೆ ಹೈನುಗಾರಿಕೆ, ಕುರಿಸಾಕಾಣಿಕೆಯಲ್ಲಿ ಸಬಲರಾಗಿ ರೈತರಿಗೆ ಮಾದರಿಯಾಗಿದ್ದಾರೆ ರಾಜ್ಯ ಪ್ರಶಸ್ತಿ ಪಡೆದ ತಾಲ್ಲೂಕಿನ ಮೇಡಿಮಾಕಲಹಳ್ಳಿ ರೈತ ಲಕ್ಷ್ಮಿನಾರಾಯಣರೆಡ್ಡಿ.
ಪ್ರತಿವರ್ಷ ಕೃಷಿ ಮೇಳಕ್ಕೆ ಹೋಗಿ ಹೊಸ ತಳಿ, ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಂಡು ಅದನ್ನು ಅನುಷ್ಠಾನ ಮಾಡುವುದೇ ಇವರ ಹವ್ಯಾಸ. ಕುಟುಂಬದಲ್ಲಿನ 6 ಜನರು ಕೃಷಿಯಲ್ಲಿ ತೊಡಗಿದ್ದಾರೆ.
ಹಲವು ವರ್ಷಗಳಿಂದ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುತ್ತಿದ್ದರು. ಕೊರೊನಾ ನಂತರ ರೇಷ್ಮೆ ಬೆಲೆ ಕುಸಿತವಾದ ಕಾರಣ ರೇಷ್ಮೆ ಕೃಷಿಯಿಂದ ದೂರ ಸರಿದು ಈಗ ಸುಮಾರು 3 ಎಕರೆ ಜಾಗದಲ್ಲಿ ದಾಳಿಂಬೆ ಬೆಳೆಯುವ ಸಿದ್ಧತೆ ನಡೆಸಿದ್ದಾರೆ.
ಹಿರಿಯರ ತಲೆಮಾರಿನಿಂದ ಕೃಷಿಯಲ್ಲಿ ಕುಟುಂಬ ತೊಡಗಿಕೊಂಡು ಬಂದಿದ್ದು ಅವರು 8 ಎಕರೆ ಜಮೀನಿನಲ್ಲಿ ಆಲೂಗಡ್ಡೆ, ಟೊಮೆಟೊ, ಬೀನ್ಸ್, ಮೆಣಸಿನಕಾಯಿ, ತೊಗರಿ ಬೆಳೆಯುತ್ತಿದ್ದಾರೆ.
ಗೃಹ ಬಳಕೆಗೆ ಗ್ಯಾಸ್ ಬದಲು ಗೋಬರ್ ಗ್ಯಾಸ್ ಬಳಸಿಕೊಳ್ಳುತ್ತಿದ್ದಾರೆ. ಸ್ಲರಿಯನ್ನು ಹಾಗೂ ಜಮೀನಿನಲ್ಲಿ ಕಸಕಡ್ಡಿಗಳ ಬಳಕೆ ಮಾಡಿಕೊಂಡು ಸಾವಯವ ಗೊಬ್ಬರದಿಂದ ಗುಣಮಟ್ಟದ ತರಕಾರಿ, ಸಿರಿ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ.
ಕೃಷಿಗೆ ಬೇಕಾಗುವ ಯಂತ್ರೋಪಕರಣ, ಹನಿ ನೀರಾವರಿ, ತುಂತುರು ನೀರಾವರಿ ಯೋಜನೆ ಹಾಗೂ ಇಲಾಖೆಯಿಂದ ಸಿಗುವ ಪ್ರತಿಯೊಂದು ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಮಿಶ್ರ ಬೆಳೆಗಳ ಜತೆಗೆ ಹಲಸು, ಹುಣಸೆ, ತೆಂಗು, ಬಾಳೆ ಕೃಷಿಯಿಂದ ವರ್ಷಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಾರೆ.
ಉಳುಮೆ ಮಾಡಲು ಅಗದ ಜಾಗದಲ್ಲಿ ಅರಿಸಿನ, ಕುರಿ ಸಾಕಾಣಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ ಜತೆಗೆ ಜಮೀನಿನಲ್ಲಿ ಬೆಳೆಯುವ ರಾಗಿ, ಜೋಳದ ಬೆಳೆಗಳಿಂದ ಬರುವ ಮೇವನ್ನು ಗೋಶಾಲೆಗಳಿಗೆ ಉಚಿತವಾಗಿ ನೀಡುತ್ತಾರೆ. ರೈತರಿಗೆ ವಿವಿಧ ಕೃಷಿಯ ಬಗ್ಗೆ ಮಾರ್ಗದರ್ಶನ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ.
ರೈತರು ಕೇವಲ ಕೃಷಿ ನಂಬಿಕೊಂಡರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಿಲ್ಲ. ಕೃಷಿಯ ಜತೆಗೆ ಉಪಕಸುಬಾಗಿ ಹೈನುಗಾರಿಕೆ, ಮೀನು, ಕೋಳಿ ಸಾಕಾಣಿಕೆ ಮಾಡಿ ಆರ್ಥಿಕವಾಗಿ ಲಕ್ಷಾಂತರ ಲಾಭಗಳಿಸಬಹುದು. ಕೃಷಿ ಇಲಾಖೆಯಿಂದ ಮಾರ್ಗದರ್ಶನ ಪಡೆಯುವುದು, ಕೃಷಿ ಮೇಳಗಳಲ್ಲಿ ಭಾಗವಹಿಸಿ ಹೊಸ ತಳಿ, ತಂತ್ರಜ್ಞಾನ ಅಳವಡಿಸಿಕೊಂಡರೆ ಉತ್ತಮ ಕೃಷಿಕನಾಗಬಹುದು ಎಂದು ರೈತ ಲಕ್ಷ್ಮಿನಾರಾಯಣರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.