ಚಿಕ್ಕಬಳ್ಳಾಪುರ: ಕೋವಿಡ್ನಿಂದ ಮರಣ ಹೊಂದಿರುವ ಬಿಸಿಯೂಟ ನೌಕರರ ಕುಟುಂಬಕ್ಕೆ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರ ಸಂಘದ ತಾಲ್ಲೂಕು ಸಮಿತಿ ಸದಸ್ಯರು ಬುಧವಾರ ತಹಶೀಲ್ದಾರರ ಕಚೇರಿ ಮುಂದೆ ಪ್ರತಿಭಟಿಸಿದರು. ತಾಲ್ಲೂಕು ಆಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬಿಸಿಯೂಟ ನೌಕರರಿಗೆ ಹಾಗೂ ಅವರ ಕುಟುಂಬಗಳಿಗೆ ಲಸಿಕೆ ನೀಡಬೇಕು. ನೂತನ ಶಿಕ್ಷಣ ನೀತಿ ಜಾರಿಗೊಳಿಸುವಾಗ ಬಿಸಿಯೂಟ ಯೋಜನೆಯನ್ನು ಬಲಿಷ್ಠಗೊಳಿಸಿ ಈಗಿರುವ ಮಾದರಿಯಲ್ಲಿಯೇ ಮುಂದುವರಿಸಬೇಕು. ನೌಕರರನ್ನು ಕಾಯಂಗೊಳಿಸಿ ಸೌಲಭ್ಯಗಳನ್ನು ಒದಗಿಸಬೇಕು. ಎಲ್ಐಸಿ ಆಧಾರಿತ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. 60 ವರ್ಷದ ನೆಪವೊಡ್ಡಿ ಅಡುಗೆ ನೌಕರರನ್ನು ಕೆಲಸದಿಂದ ತೆಗೆಯಬಾರದು ಎಂದು ನೌಕರರ ಸಂಘದ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಆಗ್ರಹಿಸಿದರು.
ಶಾಲಾ ಅವಧಿಯ ನಂತರ ನರೇಗಾ ಯೋಜನೆಯಡಿ ಶಾಲಾ ಕೈ ತೋಟದಲ್ಲಿ ಕೆಲಸ ನೀಡಿ ನರೇಗಾ ಯೋಜನೆಯಡಿ ಗೌರವ ಧನ ನೀಡಬೇಕು. ಕೆಲಸದ ಅವಧಿಯನ್ನು 4 ಗಂಟೆಯಿಂದ 6ಗಂಟೆಗೆ ಅಕ್ಷರ ದಾಸೋಹ ಕೈಪಿಡಿಯಲ್ಲಿ ಬದಲಿಸಬೇಕು ಎಂದು ಹೇಳಿದರು.
ಕೊರೊನಾ ಸಂದರ್ಭದ 2021ರ ಏಒ್ರಿಲ್ ಮತ್ತು ಮೇ ತಿಂಗಳ ವೇತನ ನೀಡಬೇಕು. ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಯಡಿ ಮೇಲ್ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷೆ ಎ.ಉಮಾ, ಕಾರ್ಯದರ್ಶಿ ಕೆ.ಆರ್.ಮಂಜುಳಾ, ಖಜಾಮಚಿ ಎನ್.ಭಾರತಿ, ಚೆನ್ನಮ್ಮ, ನಾರಾಯಣಮ್ಮ, ಪದ್ಮಾ, ಕವಿತಾ, ಸರಸ್ಪತಮ್ಮ, ವೆಂಕಟಮ್ಮ, ಸುಮಾ, ಗಂಗಾ, ಮಂಜುಳಾ, ಶಾಂತ, ಪುಷ್ಪಲತಾ, ಜಯಲಕ್ಷ್ಮಿ ಪ್ರತಿಭಟನೆಯಲ್ಲಿ ಇದ್ದರು.