ನಗರಠಾಣೆ ಇನ್ಸ್ಪೆಕ್ಟರ್ ರಂಗಶಾಮಯ್ಯ ಹಾಗೂ ಸಿಬ್ಬಂದಿ ಜಗದೀಶ್, ಕೃಷ್ಣಮೂರ್ತಿ ತಂಡ ನಗರದ ಚೇಳೂರು ವೃತ್ತದ ಕಡೆಯಲ್ಲಿ ಭಾನುವಾರ ಗಸ್ತು ತಿರುಗುವ ವೇಳೆ ಚೇಳೂರು ರಸ್ತೆಯಲ್ಲಿ ಒಬ್ಬ ವ್ಯಕ್ತಿ ದ್ವಿಚಕ್ರವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದ. ಪೊಲೀಸ್ ವಾಹನ ಕಂಡು ಗಾಬರಿಯಾಗಿ ವಾಹನ ವಾಪಸ್ ತಿರುಗಿಸಿಕೊಂಡು ಹೋಗುತ್ತಿದ್ದನು. ಇದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ಮಾಡಿದ್ದಾರೆ. ಈ ವೇಳೆ ತಾನು ಕೋಲಾರ ಕ್ಯಾಲನೂರು ನಿವಾಸಿ ಶ್ರೀನಿವಾಸ್ ಎಂದು ತಿಳಿಸಿದ್ದಾನೆ. ಅನುಮಾನಗೊಂಡ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಎಎಸ್ಪಿ ಕುಶಾಲ್ ಚೌಕ್ಸೆ ತಿಳಿಸಿದರು.
ಆರೋಪಿ ಹೊಸಕೋಟೆ, ಆವಲಹಳ್ಳಿ ಮುಂತಾದ ಕಡೆ 10 ದ್ವಿಚಕ್ರವಾಹನ ಕಳ್ಳತನ ಮಾಡಿ ತನ್ನ ಮನೆ ಬಳಿ ಇಟ್ಟುಕೊಂಡಿದ್ದ.
ಇವುಗಳ ಮೌಲ್ಯ ₹5.5 ಲಕ್ಷ. ವಾಹನ ವಶಪಡಿಸಿಕೊಂಡು ಆರೋಪಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಇನ್ಸ್ಪೆಕ್ಟರ್ ರಂಗಶಾಮಯ್ಯ, ಸಬ್ ಇನ್ಸ್ಪೆಕ್ಟರ್ಗಳಾದ ಯರ್ರಪ್ಪ, ನಾಗೇಂದ್ರ ಪ್ರಸಾದ್, ರಮೇಶ್, ಶಷಾಬುದ್ದೀನ್, ಅಮರ್, ಸಿಬ್ಬಂದಿ ವಿಶ್ವನಾಥ್, ಜಗದೀಶ್, ಮಂಜುನಾಥ್, ಚೌಡರೆಡ್ಡಿ, ರವೀಂದ್ರ, ಕೃಷ್ಣಮೂರ್ತಿ ತಂಡ ವಿಚಾರಣೆ ನಡೆಸಿ ವಾಹನ ವಶಕ್ಕೆ ಪಡೆಯುವಲ್ಲಿ ಯಶಶ್ವಿಯಾಗಿದೆ ಎಂದು ಶ್ಲಾಘಿಸಿದರು.