ಗೌರಿಬಿದನೂರು: ರಾಯನಕಲ್ಲು ಯುವಕ ಬಾನುಪ್ರಸಾದ್ ರೆಡ್ಡಿ (22) ಸೈಕಲ್ ಸವಾರಿ ಮೂಲಕ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆ ರಾಮಮಂದಿರ ದರ್ಶನಕ್ಕೆ ತೆರಳಿದರು.
ಅವರನ್ನು ಮಾರ್ಗ ಮಧ್ಯೆ ಡಿ.ಪಾಳ್ಯ ಗ್ರಾಮದಲ್ಲಿ ರಾಮಭಕ್ತರು, ವಿಶ್ವ ಹಿಂದೂ ಪರಿಷತ್ ಮತ್ತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಬರಮಾಡಿಕೊಂಡು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಸಾಯಿಬಾಬಾ ಮಂದಿರದಲ್ಲಿ ಪೂಜೆ ಸಲ್ಲಿಸಿ ಶುಭಕೋರಿ ಬೀಳ್ಕೊಟ್ಟರು.
ವಿಶ್ವ ಹಿಂದೂ ಪರಿಷತ್ ಸಾಗಾನಹಳ್ಳಿ ಶಿವಕುಮಾರ್ ಮಾತನಾಡಿ, ಹನುಮನ ನಾಡಿನಿಂದ ದೂರದ ರಾಮನ ನಾಡಿಗೆ ಸೈಕಲ್ ಸವಾರಿ ಮೂಲಕ ಹೊರಟಿರುವ ಬಾನುಪ್ರಸಾದ್ ರೆಡ್ಡಿ ಅವರ ನಲವತ್ತು ದಿನಗಳ ಪ್ರವಾಸ ಅತ್ಯಂತ ಸುಖಕರವಾಗಿರಲಿ ಎಂದು ಹಾರೈಸಿದರು.
ಶಿರಿಡಿ ಬಾಬಾ ಮಂದಿರದ ಧರ್ಮದರ್ಶಿ ಹರೀಶ್ ಮಾತನಾಡಿ, ಬಾನುಪ್ರಸಾದ್ ರೆಡ್ಡಿ ಅವರ ಸಂಕಲ್ಪ ನಿಜಕ್ಕೂ ಮೆಚ್ಚುಗೆ ಕಾರ್ಯ ಎಂದರು.
ಮೈಲಪ್ಪ, ಆದಿನಾರಾಯಣಪ್ಪ, ಮಾರುತಿ, ರವಿ, ಶ್ರೀನಿವಾಸ್ ಕಲ್ಯಾಣ್, ರಮೇಶ್ , ಶಶಿಧರ್, ವಿಶ್ವ, ರಾಘವೇಂದ್ರ ಹಾಗೂ ವಿಶ್ವ ಹಿಂದೂ ಪರಿಷತ್ ರಮೇಶ್ ಬಾಬು, ಸುಧಾಕರ್ ರೆಡ್ಡಿ, ಭಾಸ್ಕರ್ , ದಂಡಿಗಾನಹಳ್ಳಿ ರಮೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.