ಚಿಕ್ಕಬಳ್ಳಾಪುರ: ದ್ರೌಪದಿ ಮತ್ತು ಪಾಂಡವರ ಸಂಬಂಧದ ಬಗ್ಗೆ ಅವಹೇಳನಕಾರಿಯಾಗಿ ಇನ್ಸ್ಟಾಗ್ರಾಮ್ನಲ್ಲಿ ಬರಹ ಪ್ರಕಟಿಸಿದ ಆರೋಪದ ಮೇಲೆ ಮಂಚೇನಹಳ್ಳಿ ತಾಲ್ಲೂಕಿನ ಪಿಡಚಲಹಳ್ಳಿ ಗ್ರಾಮದ ನಾಗರಾಜು ವಿರುದ್ಧ ಮಂಚೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
‘ನಾವು ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುವ ಚಿತ್ರಗಳು ಮತ್ತು ವಿಷಯಗಳ ಮೇಲೆ ಗಮನ ಹರಿಸುತ್ತಿದ್ದೇವೆ. ನಾಗರಾಜ್.ಪಿ.ಎನ್. ರಾವಣಾಸುರ ಎಂಬುವವರು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶುಕ್ರವಾರ ಸಂಜೆ, ದ್ರೌಪದಿಯು ಪಂಚಪಾಂಡವರ ಜೊತೆಯಲ್ಲಿ ಮಲಗಿರುವ ಚಿತ್ರವನ್ನು ಪ್ರಕಟಿಸಿದ್ದರು.
‘ಮೊದಲ ಸರದಿ ಮುಗಿಸಿಕೊಂಡು ಎರಡನೇ ಸರದಿಗಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ’ ಎಂದು ಅವಹೇಳನವಾಗಿ ಬರೆದಿದ್ದರು. ಇದು ಧಾರ್ಮಿಕ ನಂಬಿಕೆ ಹಾಗೂ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಾಮಾಜಿಕ ಜಾಲತಾಣಗಳ ಮೇಲಿನ ನಿಗಾ ಘಟಕದ ಸಿಬ್ಬಂದಿ ಎ.ಆರ್.ಗೋಪಾಲ್ ದೂರಿನಲ್ಲಿ ವಿವರಿಸಿದ್ದಾರೆ.