ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ದಿನೇ ದಿನೇ ಮಾರಣಾಂತಿಕ ಕೋವಿಡ್ 19 ಪ್ರಕರಣಗಳು ಏರುಮುಖವಾಗುತ್ತಿದ್ದು, ಶನಿವಾರದ ಹೊತ್ತಿಗೆ ಕೋವಿಡ್ ಸೋಂಕಿತರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿ ಜಿಲ್ಲೆಯ ನಾಗರಿಕರಲ್ಲಿ ತಲ್ಲಣ ಮೂಡಿಸಿದೆ.
ಮೆಕ್ಕಾ ಯಾತ್ರೆ ಸಮಯದಲ್ಲಿ ಕೋವಿಡ್ ಸೋಂಕಿಸಿಕೊಂಡಿದ್ದ ಗೌರಿಬಿದನೂರು ನಗರದ ನಾಲ್ಕು ಯಾತ್ರಿಕರ ಪೈಕಿ, ಸದ್ಯ ಚಿಕಿತ್ಸೆ ಪಡೆಯುತ್ತಿರುವ ಮೂರು ಜನರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಪೈಕಿ ಐದು ಜನರಿಗೆ ಸೋಂಕು ತಗಲಿರುವುದು ಶುಕ್ರವಾರ ಸಂಜೆ ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ.
ಕೂಡಲೇ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಅಧಿಕಾರಿಗಳು ಗೌರಿಬಿದನೂರಿನಲ್ಲಿ ಗೃಹ ನಿರ್ಬಂಧನದಲಿದ್ದ ಸುಮಾರು 22 ಜನರ ಪೈಕಿ ಏಳು ಜನರನ್ನು ಶುಕ್ರವಾರ ರಾತ್ರಿ ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಯಲ್ಲಿ ತೆರೆದ ಕೋವಿಡ್ ಪ್ರಕರಣಗಳ ಪ್ರತ್ಯೇಕ ವಾರ್ಡ್ಗೆ ಸ್ಥಳಾಂತರಿಸಿ, ವಿಶೇಷ ನಿಗಾ ವಹಿಸಲಾಗಿದೆ.
ಇತ್ತೀಚೆಗಷ್ಟೇ ಕೋವಿಡ್ಗೆ ಗೌರಿಬಿದನೂರಿನ ಒಬ್ಬ ವೃದ್ಧೆ ಬಲಿಯಾಗಿ, ಮೂರು ಜನರು ಜೀವನ್ಮರಣದ ಹೋರಾಟ ನಡೆಸಿರುವಾಗಲೇ, ಮತ್ತೆ ಜಿಲ್ಲೆಯಲ್ಲಿ ಏಕಾಏಕಿ ಐದು ಪ್ರಕರಣಗಳು ವರದಿಯಾಗಿದ್ದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.
ಇದರ ಬೆನ್ನಲ್ಲೇ ಜಿಲ್ಲಾಡಳಿತ ಜಿಲ್ಲೆಯಲ್ಲಿ ಮತ್ತು ವಿಶೇಷವಾಗಿ ಗೌರಿಬಿದನೂರಿನಲ್ಲಿ ಲಾಕ್ಡೌನ್ ಅನುಷ್ಠಾನ ಮತ್ತಷ್ಟು ಬಿಗಿಗೊಳಿಸಿದ್ದು, ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅನೇಕ ಹಿರಿಯ ಅಧಿಕಾರಿಗಳು ಗೌರಿಬಿದನೂರಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ, ಪರಿಸ್ಥಿತಿ ಹತೋಟಿಗೆ ತರುವ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಇನ್ನೊಂದೆಡೆ ಪೊಲೀಸರು ಕೂಡ ಗಸ್ತು ಹೆಚ್ಚಳ ಮಾಡಿದ್ದು, ಜನರು ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ನೀಡುತ್ತಿದ್ದು, ನಗರದಲ್ಲಿ ತಿರುಗಾಡುವವರಿಗೆ ಲಾಠಿ ರುಚಿ ತೋರಿಸಿ ಮನೆಯ ಹಾದಿ ತೋರಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.