ಗೌರಿಬಿದನೂರು: ದೀಪಾವಳಿ ಹಬ್ಬದ ಅಂಗವಾಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಜಿ.ಪಂ. ಸದಸ್ಯ ಕೆ. ಕೆಂಪರಾಜು ಭೇಟಿ ನೀಡಿ ಜನತೆಗೆ ಹಬ್ಬದ ಉಡುಗೊರೆ ಹಾಗೂ ಸಿಹಿ ವಿತರಿಸಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಈ ಬಾರಿಯ ದೀಪಾವಳಿ ಹಬ್ಬದ ಆಚರಣೆಗೆ ಕೊರೊನಾ ಕಪ್ಪುಚುಕ್ಕೆಯಂತಿದೆ. ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮೂರು ಹಂತದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಆರ್ಥಿಕ ನೆರವು ನೀಡಲಾಗಿದೆ. ಮುಂದಿನ ದಿನಗಳಲ್ಲಿ ನೆರವಿನ ಅಗತ್ಯವಿರುವ ಪ್ರತಿ ಮನೆಗೆ ಭೇಟಿ ಮಾಡಿ ಸ್ಪಂದಿಸಲಾಗುವುದು ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಆಯೋಜಿಸುವ ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಗಳು ಸ್ಥಳೀಯ ಜನರ ನಡುವೆ ನಂಬಿಕೆ ಮತ್ತು ವಿಶ್ವಾಸವನ್ನು ಬೆಳೆಸುತ್ತವೆ. ಜತೆಗೆ ಪ್ರತಿಯೊಬ್ಬರಲ್ಲಿ ಸೋದರತ್ವ ಭಾವನೆ ಮೂಡಿಸಿ ಶಾಂತಿ, ಸೌಹಾರ್ದ ಹಾಗೂ ಸಾಮರಸ್ಯ ಮೂಡಿಸುತ್ತವೆ ಎಂದು ಹೇಳಿದರು.
ಜನತೆ ಸಂಕಷ್ಟದ ನಡುವೆಯೂ ಸರಳವಾಗಿ ಸಂಸ್ಕೃತಿಗೆ ಪೂರಕವಾಗಿ ಹಬ್ಬ ಆಚರಣೆ ಮಾಡುತ್ತಿರುವುದು ವಿಶೇಷವಾಗಿದೆ. ಇದರಿಂದ ದೇಶದ ಪಾವಿತ್ರ್ಯ ಉಳಿಯಲು ಸಾಧ್ಯವಾಗುತ್ತದೆ ಎಂದರು.