ಚಿಕ್ಕಬಳ್ಳಾಪುರ: ಅತ್ತ ಡಾ.ಕೆ.ಸುಧಾಕರ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಬಲಮುರಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಸುಧಾಕರ್ ಹಾಗೂ ಬಿಜೆಪಿ ಪರವಾಗಿ ಘೋಷಣೆಗಳು ಮೊಳಗಿದವು. ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಮಹಿಳಾ ಕಾರ್ಯಕರ್ತರು ಸಂಭ್ರಮಿಸಿದರು.
ಮಧ್ಯಾಹ್ನ 2 ಗಂಟೆಯಲ್ಲಿ ಬಲಮುರಿ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದರು. ಸುಧಾಕರ್ ಅಣ್ಣ ಸೂಪರ್ ಸಾರ್, ಬಿಜೆಪಿ ಜಿಂದಾಬಾದ್, ಬಸವರಾಜ ಬೊಮ್ಮಾಯಿ ಅವರಿಗೆ ಜೈ ಎಂದು ಘೋಷಣೆಗಳನ್ನು ಕೂಗಿದರು. ಪರಸ್ಪರ ಸಿಹಿ ತಿನ್ನಿಸಿ ಖುಷಿ ಹಂಚಿಕೊಂಡರು.
ಸುಧಾಕರ್ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಬಿಜೆಪಿ ಮುಖಂಡರಿಗೆ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಚಿಕ್ಕಬಳ್ಳಾಪುರ ಜನರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಮುಖಂಡರು ನುಡಿದರು.
ಮುಖಂಡರಾದ ಅಪ್ಪಾಲು ಮಂಜುನಾಥ್, ಬಿ.ವಿ.ಆನಂದ್, ಶ್ರೀನಿವಾಸ್, ರಣಜಿತ್ ಕುಮಾರ್, ಲಕ್ಷ್ಮಿನಾರಾಯಣ ಗುಪ್ತ, ಪ್ರೇಮಲೀಲಾ ವೆಂಕಟೇಶ್, ಕಲಾವತಿ ನಾಗರಾಜ್, ಮೊಬೈಲ್ ಬಾಬು, ಲಕ್ಷ್ಮಿಪತಿ, ಅಭಿಷೇಕ ಗೌಡ, ಸದಾಶಿವ ಇತರರು ಇದ್ದರು.
ಬೆಂಗಳೂರಿನಲ್ಲಿ ಮುಖಂಡರು: ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ನಗರಸಭೆ ಸದಸ್ಯರು ಹಾಗೂ ಕೆಲವು ಮುಖಂಡರು ಬೆಳಿಗ್ಗೆ 10.30ರ ವೇಳೆಗೆ ನಗರದ ಶನೈಶ್ಚರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಮಾಣ ವಚನ ಸಮಾರಂಭಕ್ಕೆ ತೆರಳಿದರು. ಆಗಲೂ ಸುಧಾಕರ್ ಅವರ ಪರವಾಗಿ ಘೋಷಣೆಗಳು ಮೊಳಗಿದವು.