ಈ ಹಿನ್ನೆಲೆಯಲ್ಲಿ ಪಟ್ಟಣದ ಡಾ.ಎಚ್.ಎನ್.ವೃತ್ತ (ಗೂಳೂರು ವೃತ್ತ)ಕ್ಕೆ ಶನಿವಾರ ಬೆಳಿಗ್ಗೆ ಪುರಸಭೆ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ಮಾಡಿದರು. ವೃತ್ತದಲ್ಲಿನ ನಂದಿನಿ ಹಾಲಿನ ಕೇಂದ್ರದ ಪಕ್ಕ, ಮುಖ್ಯರಸ್ತೆಯ ಹಾಗೂ ಸುತ್ತಲಿನ ಚರಂಡಿಗಳಲ್ಲಿ ತುಂಬಿಕೊಂಡಿದ್ದ ಹೂಳು, ಕಸ, ಕಡ್ಡಿ ಹಾಗೂ ತ್ಯಾಜ್ಯಗಳನ್ನು ಯಂತ್ರಗಳಿಂದ ಸ್ವಚ್ಛಗೊಳಿಸಿ ರಸ್ತೆಯ ಪಕ್ಕದಲ್ಲಿ ಹಾಕಿದರು. ವೃತ್ತದಲ್ಲಿನ ಸಾರ್ವಜನಿಕ ಶೌಚಾಲಯದ ಕೆಳ ಭಾಗದಲ್ಲಿನ ಚರಂಡಿಯನ್ನು ಸ್ವಚ್ಛಗೊಳಿಸಿದರು.
‘ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿನ ಚರಂಡಿಗಳಲ್ಲಿ ಕಸ, ಕಡ್ಡಿ, ಪ್ಲಾಸ್ಲಿಕ್, ಕವರ್ಗಳನ್ನು ಹಾಕದಂತೆ ಪುರಸಭೆ ಅಧಿಕಾರಿಗಳು, ಸಿಬ್ಬಂದಿಯವರು ಗಮನ ಹರಿಸಬೇಕು. ತಾತ್ಕಾಲಿಕ ಪರಿಹಾರಗಳನ್ನು ಬಿಟ್ಟು, ಮಳೆಯ, ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಹೂಳು, ತ್ಯಾಜ್ಯಗಳನ್ನು ಸ್ವಚ್ಛಗೊಳಿಸಬೇಕು‘ ಎಂದು ನಂದಿನಿ ಹಾಲಿನ ಕೇಂದ್ರದ ವ್ಯಾಪಾರಿ ವೆಂಕಟರಾಮರೆಡ್ಡಿ ಮನವಿ ಮಾಡಿದರು.
‘ಪಟ್ಟಣದ ಗೂಳೂರು ವೃತ್ತದಲ್ಲಿನ ಚರಂಡಿಗಳನ್ನು ಸ್ವಚ್ಛತೆ ಮಾಡಬೇಕು ಎಂದು ಪುರಸಭೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಚರಂಡಿಗಳಲ್ಲಿ ಯಂತ್ರದಿಂದ ಹೂಳು, ತ್ಯಾಜ್ಯವನ್ನು ಸ್ವಚ್ಛತೆ ಮಾಡಲಾಗಿದೆ. ಬೀದಿಬದಿ ವ್ಯಾಪಾರಸ್ಥರು, ಅಂಗಡಿ, ಹೋಟೆಲ್ ಮಾಲೀಕರು, ಒಣ, ಹಸಿ ಕಸ, ತ್ಯಾಜ್ಯವನ್ನು ಬೇರ್ಪಡಿಸಿ, ಪೌರ ಸಿಬ್ಬಂದಿಗೆ ನೀಡಬೇಕು. ಚರಂಡಿಗಳಲ್ಲಿ, ರಸ್ತೆಗಳಲ್ಲಿ ಬಿಸಾಡಿದರೆ ದಂಡ ವಿಧಿಸಲಾಗುವುದು‘ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಮಧುಕರ್ ಎಚ್ಚರಿಕೆ ನೀಡಿದ್ದಾರೆ.