ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಶತಮಾನ ಕಂಡ ಇಡಗೂರು ಸರ್ಕಾರಿ ಶಾಲೆ

ಕಲೆ, ಸಾಹಿತ್ಯ, ಸಾಂಸ್ಕೃತಿಕ ನೆಲೆಯಾದ ಶಾಲೆ l ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಆನಾವರಣಕ್ಕೆ ವೇದಿಕೆ
Published 24 ಜೂನ್ 2023, 7:14 IST
Last Updated 24 ಜೂನ್ 2023, 7:14 IST
ಅಕ್ಷರ ಗಾತ್ರ

ಗೌರಿಬಿದನೂರು: ದಶಕಗಳಿಂದಲೂ ಗ್ರಾಮೀಣ ಭಾಗದ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ‌ ಜತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಪಾರಂಪರಿಕ ನೆಲೆಗಟ್ಟಿನಿಂದ ಕೂಡಿರುವ ಶತಮಾನದ ಶಾಲೆ ತಾಲ್ಲೂಕಿನ ಇಡಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಾಗಿದೆ.

ಕೇವಲ ಶಿಕ್ಷಣವಲ್ಲದೆ ಮಕ್ಕಳಲ್ಲಿನ ಸುಪ್ತ ಪ್ರತಿಭೆಯ ಅನಾವರಣಕ್ಕೆ ಇಲ್ಲಿ ಸಾಕಷ್ಟು ಅವಕಾಶಗಳಿವೆ. ದಶಕಗಳಿಂದಲೂ ಈ ಶಾಲೆಯಲ್ಲಿ ಓದಿದ ಹತ್ತಾರು‌ ಮಂದಿ ರಾಜ್ಯದ ಕಲೆ, ಸಾಹಿತ್ಯ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಿದರ್ಶನಗಳಿವೆ.

ಶತಮಾನೋತ್ಸವವನ್ನು ಆಚರಣೆ ಮಾಡಿಕೊಂಡಿರುವ ಈ ಶಾಲೆಯು ದಶಕಗಳ ಹಿಂದೆ 700-800ರವರೆಗೂ ಮಕ್ಕಳ ಸಂಖ್ಯೆಯನ್ನು ಹೊಂದಿತ್ತು. ಕಾಲಾಂತರದಲ್ಲಿ ಕಡಿಮೆಯಾಗುತ್ತಾ ಬಂದಿದೆ. ಇಂದಿಗೂ ಉತ್ತಮ ಸಂಖ್ಯೆಯಲ್ಲಿದ್ದು ಮಕ್ಕಳ‌ ಕಲಿಕೆಗೆ ನೈಜ ಪರಿಸರ ನಿರ್ಮಾಣವಾಗಿದೆ. ಪ್ರತೀ‌ ವರ್ಷ ಪರಿಸರ ಸಂರಕ್ಷಣೆ ಕಾರ್ಯಗಳನ್ನು ಮಾಡಲಾಗುತ್ತಿದೆ.

ಪ್ರಸ್ತುತ ಶಾಲೆಯಲ್ಲಿ ಒಂದರಿಂದ 7ನೇ ತರಗತಿಯವರೆಗೆ ಕಲಿಯಲು ಅವಕಾಶವಿದ್ದು, ಒಂದನೇ ತರಗತಿಯಲ್ಲಿ 26, ಎರಡರಲ್ಲಿ 16, ಮೂರರಲ್ಲಿ 28, ನಾಲ್ಕರಲ್ಲಿ 27, ಐದರಲ್ಲಿ 25, ಆರರಲ್ಲಿ 26, ಏಳನೇ ತರಗತಿಯಲ್ಲಿ 14 ಸೇರಿದಂತೆ ಒಟ್ಟು 160 ವಿದ್ಯಾರ್ಥಿಗಳಿದ್ದಾರೆ. ಮಕ್ಕಳ ಕಲಿಕೆಗೆ ಅಗತ್ಯವಾದ ಶಾಲಾ ಕೊಠಡಿಗಳ ಜತೆಗೆ ವಿಶಾಲವಾದ ಆಟದ ಮೈದಾನವಿದೆ. ಕಲೆ, ಸಾಹಿತ್ಯ, ಕ್ರೀಡೆ, ನಾಟಕ, ಸೇರಿದಂತೆ ‌ಇತರ ಕಾರ್ಯಕ್ರಮಗಳ‌ ಅನಾವರಣಕ್ಕೆ ಭವ್ಯ ವೇದಿಕೆಯನ್ನು ಒಳಗೊಂಡಿದೆ. ಪ್ರತೀ ವರ್ಷವೂ ಹಳೆ‌ ವಿದ್ಯಾರ್ಥಿಗಳು ಮತ್ತು ವಿವಿಧ ‌ಸಂಘಸಂಸ್ಥೆಗಳ ಸಹಕಾರದಿಂದ ಮಕ್ಕಳ ಕಲಿಕೆಗೆ ಅಗತ್ಯವಿರುವ ಪರಿಕರಗಳನ್ನು ಪಡೆಯಲಾಗುತ್ತಿದೆ‌.ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಕಲಿಕೆಗೆ ಅವಕಾಶವಿರುವ ಕಾರಣ ಈ ಶಾಲೆಯು ನಗರದ ಯಾವುದೇ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ ಎಂಬಂತಿದೆ. ಪ್ರತೀ‌ ವರ್ಷ ಶಿಕ್ಷಣ ಇಲಾಖೆ ಆಯೋಜನೆ ‌ಮಾಡುವ ಹೋಬಳಿ‌ ಮತ್ತು ತಾಲ್ಲೂಕು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಈ ಶಾಲೆಯ ಮಕ್ಕಳೇ ಮೇಲುಗೈ ಸಾಧಿಸುತ್ತಿದ್ದಾರೆ. 

ಅದ್ದೂರಿ ವಾರ್ಷಿಕೋತ್ಸವ ಮತ್ತು ದತ್ತಿ ನಿಧಿ ವಿತರಣೆ: ಶಾಲೆಯಲ್ಲಿ ಪ್ರತಿ ವರ್ಷ ಅದ್ದೂರಿ ಶಾಲಾ ವಾರ್ಷಿಕೋತ್ಸವವನ್ನು ಆಚರಣೆ ಮಾಡುವುದಲ್ಲದೆ, ಮಕ್ಕಳಲ್ಲಿನ ಪ್ರತಿಭೆ ಅನಾವರಣ ಮಾಡಲಾಗುತ್ತಿದೆ. ಶಾಲೆಯ ನಿವೃತ್ತ ಶಿಕ್ಷಕರಾದ ಎಲ್.ನಾಗರಾಜ್, ನಾಗರಾಜಯ್ಯ, ಪ್ರಭಾವತಿ ಮತ್ತು ರಂಗಪ್ಪ ಅವರ ಸಹಕಾರದಿಂದ ಪ್ರತಿ ವರ್ಷ ದತ್ತಿನಿಧಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ.

ಹಳೆ ವಿದ್ಯಾರ್ಥಿಗಳ ಸಹಕಾರ: ಈ ಶಾಲೆಯಲ್ಲಿ ಶತಮಾನಗಳಿಂದ ವ್ಯಾಸಂಗ ಮಾಡಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದು ವಿವಿಧೆಡೆಗಳಲ್ಲಿ ಬದುಕು ಕಟ್ಟಿಕೊಂಡಿರುವ ಹಳೆ ವಿದ್ಯಾರ್ಥಿಗಳು ಪ್ರತಿ ವರ್ಷ ತಾವು ಓದಿದ ಶಾಲೆಗೆ ಒಂದಲ್ಲಾ ಕೊಡುಗೆ ನೀಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗುತ್ತಿದ್ದಾರೆ. ಈಗಾಗಲೇ ಶಾಲೆಗೆ ಪ್ರಿಂಟರ್, ಪ್ರೊಜೆಕ್ಟರ್, ಧ್ವನಿವರ್ಧಕ, ಡೆಸ್ಕ್, ಬೀರು, ಚೇರ್‌ಗಳು, ಶುದ್ಧ ಕುಡಿಯುವ ನೀರಿನ ಘಟಕ, ಕ್ರೀಡಾ ಸಾಮಗ್ರಿಗಳು, ತಟ್ಟೆ ಲೋಟ ಸೇರಿದಂತೆ ಇನ್ನಿತರ ಪರಿಕರಗಳನ್ನು ನೀಡಿದ್ದಾರೆ.

ಸ್ಮಾರ್ಟ್ ಕ್ಲಾಸ್: ಶಾಲೆಯಲ್ಲಿ ಮಕ್ಕಳ ಕಲಿಕೆಗೆ ನೆರವಾಗುವ ನಿಟ್ಟಿನಲ್ಲಿ ಆಧುನಿಕ ‌ತಂತ್ರಜ್ಞಾನ ಆಧಾರಿತವಾದ ಸ್ಮಾರ್ಟ್ ಕ್ಲಾಸ್ ಹೊಂದಿದ್ದು, ಇದರಿಂದಾಗಿ ‌ಮಕ್ಕಳು ಆಸಕ್ತಿದಾಯಕವಾಗಿ ಕಲಿಯಲು ನೆರವಾಗಿದೆ.

ಸುಗಮ್ಯ ಶಿಕ್ಷ ಸಹಕಾರ

ಸ್ಥಳೀಯ ಖಾಸಗಿ ಕಂಪನಿಯೊಂದು ಸುಗಮ್ಯ ಶಿಕ್ಷ ಸಂಸ್ಥೆಯ ವತಿಯಿಂದ ಶಾಲೆಯ ಮಕ್ಕಳಿಗೆ ಸುಮಾರು 18 ಕಂಪ್ಯೂಟರ್‌ಗಳನ್ನು ನೀಡಿ ಪ್ರತ್ಯೇಕ ಶಿಕ್ಷಕರನ್ನು ನೇಮಕ ಮಾಡಿ ವೈಜ್ಞಾನಿಕ ವಿಧಾನದಲ್ಲಿ ಕಂಪ್ಯೂಟರ್ ಶಿಕ್ಷಣ ನೀಡುವ ಮೂಲಕ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕಾರಣರಾಗಿದ್ದಾರೆ. ಜತೆಗೆ ದೈಹಿಕ ಶಿಕ್ಷಣ ಮತ್ತು ಇಂಗ್ಲಿಷ್ ಕಲಿಕೆಗೆ ಪ್ರತ್ಯೇಕ ಶಿಕ್ಷಕರನ್ನು ನೇಮಕ ಮಾಡಿದ್ದಾರೆ.

ಕಲೆ, ‌ಸಾಹಿತ್ಯದ ನಂಟು

ಈ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಸಾಹಿತಿ ಮತ್ತು ಕನ್ನಡ ಸಾಹಿತ್ಯ‌ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಲ್.ಬಸವರಾಜ್ ಅವರ ಕೊಡುಗೆ ಶಾಲೆಗೆ ಅಪಾರವಾಗಿದೆ. ಕನ್ನಡ ಸಾಹಿತ್ಯ ರಂಗದಲ್ಲಿ ಖ್ಯಾತಿ ಪಡೆದಿರುವ ರುದ್ರಕವಿ ಕೂಡ ಇದೇ ಶಾಲೆಯವರು. ಸಾಹಿತಿ ವೈ.ಎಲ್.ಹನುಮಂತರಾವ್ ಸೇರಿದಂತೆ ಅನೇಕ ಮಂದಿ ಈ ಶಾಲೆ ಹಳೆಯ ವಿದ್ಯಾರ್ಥಿಗಳಾಗಿದ್ದು, ಇಲ್ಲಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಾಕ್ಷಿಯಾಗಿದೆ.

ಸುಗಮ್ಯ ಶಿಕ್ಷ ಸಂಸ್ಥೆ ಸಹಕಾರ

ಸ್ಥಳೀಯ ಖಾಸಗಿ ಕಂಪನಿಯೊಂದು ಸುಗಮ್ಯ ಶಿಕ್ಷ ಸಂಸ್ಥೆಯ ವತಿಯಿಂದ ಶಾಲೆಯ ಮಕ್ಕಳಿಗೆ ಸುಮಾರು 18 ಕಂಪ್ಯೂಟರ್‌ಗಳನ್ನು ನೀಡಿ ಪ್ರತ್ಯೇಕ ಶಿಕ್ಷಕರನ್ನು ನೇಮಕ ಮಾಡಿ ವೈಜ್ಞಾನಿಕ ವಿಧಾನದಲ್ಲಿ ಕಂಪ್ಯೂಟರ್ ಶಿಕ್ಷಣ ನೀಡುವ ಮೂಲಕ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕಾರಣರಾಗಿದ್ದಾರೆ. ಜತೆಗೆ ದೈಹಿಕ ಶಿಕ್ಷಣ ಮತ್ತು ಇಂಗ್ಲಿಷ್ ಕಲಿಕೆಗೆ ಪ್ರತ್ಯೇಕ ಶಿಕ್ಷಕರನ್ನು ನೇಮಕ ಮಾಡಿದ್ದಾರೆ.

ಆಧುನಿಕ ತಂತ್ರಜ್ಞಾನದೊಂದಿಗೆ ಪಾಠ

ಶಾಲಾ ಹಂತದಲ್ಲಿ ಮಕ್ಕಳ ಕಲಿಕೆಯ ಜತೆಗೆ ಆಧುನಿಕ ತಂತ್ರಜ್ಞಾನ ಆಧಾರಿತ ಕಲಿಕೋಪಕರಣಗಳನ್ನು ಬಳಸಿ ಶಿಕ್ಷಕರು ಭೋದನೆ ಮಾಡುತ್ತಾರೆ. ಮಕ್ಕಳ ದಾಹಕ್ಕೆ ಅನುಗುಣವಾಗಿ ಕಲಿಸುವ ಬದ್ಧತೆ ಶಿಕ್ಷಕರಲ್ಲಿದೆ. ಅಪಾರ ಜ್ಞಾನ ಭಂಡಾರದ ಜತೆಗೆ ಬೃಹತ್ ಪುಸ್ತಕ ಭಂಡಾರ ಹೊಂದಿರುವುದು ಸಹಕಾರಿಯಾಗಿದೆ. ಸದಾ ಹಳೆ ವಿದ್ಯಾರ್ಥಿಗಳ ನಂಟು ಶಾಲೆಯೊಂದಿಗಿದೆ

-ಇ.ಸಿದ್ದೇಶ್ವರ, ಮುಖ್ಯ ಶಿಕ್ಷಕ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇಡಗೂರು

ಪತ್ರಿಭೆ ಅನಾವರಣಕ್ಕೆ ಸಾಕ್ಷಿ

ಶಾಲೆಯಲ್ಲಿ ದಶಕಗಳಿಂದಲೂ ‌ನಿರಂತರವಾಗಿ ಶೈಕ್ಷಣಿಕ ಕಾರ್ಯಗಳ ಜತೆಗೆ ಕಲೆ, ಸಾಹಿತ್ಯ, ನಾಟಕ, ರಂಗಭೂಮಿ, ಸೇರಿದಂತೆ ‌ಇತರ ಚಟುವಟಿಕೆಗಳು ನಡೆಯುತ್ತಿರುತ್ತವೆ. ಇದರಿಂದಾಗಿ‌ ಮಕ್ಕಳಲ್ಲಿ ‌ಶಿಕ್ಷಣದ ಜತೆಗೆ ಕಲೆ, ಸಾಹಿತ್ಯ, ರಂಗಭೂಮಿಯ ಅಭಿರುಚಿ ಬೆಳೆಸಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿನ ಸುಪ್ತ ಪ್ರತಿಭೆಯ ಅನಾವರಣಕ್ಕೆ ಶಾಲೆಯು ಸಾಕ್ಷಿಯಾಗಿದೆ 

-ವೈ.ಟಿ.ಪ್ರಸನ್ನ ಕುಮಾರ್, ಹಳೆ ವಿದ್ಯಾರ್ಥಿ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷ

ಸಾಹಿತ್ಯದ ನೆಲೆಬೀಡು

ಶಾಲೆಯು ನಮಗೆ ಕೇವಲ ಶಿಕ್ಷಣವನ್ನು ‌ಮಾತ್ರ ನೀಡಿಲ್ಲ, ಜತೆಗೆ ಸಮಾಜದಲ್ಲಿ ಬದುಕುವ ಕೌಶಲಗಳನ್ನು ಕಲಿಸಿದೆ. ಅದರಿಂದಾಗಿ ನಮ್ಮ ಕೊನೆ ಉಸಿರಿರುವವರೆಗೂ ಋಣ ತೀರಿಸಿಕೊಳ್ಳುವ ಅವಕಾಶವಿದ್ದು, ಓದಿದ ಶಾಲೆಯಲ್ಲಿನ ಮಕ್ಕಳಿಗೆ ಪ್ರತಿ ವರ್ಷ ಕಲಿಕಾ ಪರಿಕರಗಳನ್ನು ವಿತರಣೆ ಮಾಡುತ್ತಿದ್ದೇನೆ. ಇದೊಂದು ಐತಿಹಾಸಿಕ ಮತ್ತು ಸಾಹಿತ್ಯದ ನೆಲೆಬೀಡಾಗಿದೆ

-ಆರ್.ವೆಂಕಟಾಚಲ, ಜಕ್ಕೇನಹಳ್ಳಿ, ಹಳೆ ವಿದ್ಯಾರ್ಥಿ

ಬದುಕಿನ ಮೌಲ್ಯ ಕಲಿಸಿದ ಶಾಲೆ

ಶಾಲೆಯು ಆರಂಭದಿಂದಲೂ ಮಕ್ಕಳಿಗೆ ‌ಕೇವಲ ಶಿಕ್ಷಣವನ್ನು ‌ಮಾತ್ರ ಕಲಿಸದೆ ಅವರ ಬದುಕಿಗೆ ಸಹಕಾರಿಯಾಗುವ ಎಲ್ಲ ಗುಣಗಳನ್ನು ‌ಕಲಿಸಿದೆ. ದಶಕಗಳಿಂದಲೂ ತನ್ನ ಶೈಕ್ಷಣಿಕ ಮತ್ತು ಸಾಹಿತ್ಯದ ಮೌಲ್ಯಗಳನ್ನು ಉಳಿಸಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಈ ಶಾಲೆಯಲ್ಲಿ ಓದಿದ ನಾವುಗಳೇ ಧನ್ಯ 

-ಜಿ.ಸೋಮಯ್ಯ, ಹಳೆ ವಿದ್ಯಾರ್ಥಿ

ವಿದ್ಯಾರ್ಥಿಗಳ ಬದುಕಿಗೆ ಆಸರೆ

ಶತಮಾನ ಕಂಡಿರುವ‌ ಶಾಲೆಯು ತನ್ನದೇ ಆದ ಇತಿಹಾಸ ಹೊಂದಿದೆ. ಜೊತೆಗೆ ಸಾವಿರಾರು ‌ಮಂದಿ ವಿದ್ಯಾರ್ಥಿಗಳು ಬದುಕಿಗೆ ಆಸರೆಯಾಗಿದೆ. ಯಾವುದೇ ಖಾಸಗೀ ಶಾಲೆಗಳಿಗೂ ಕಡಿಮೆಯಿಲ್ಲದಂತೆ ಮಕ್ಕಳ ಕಲಿಕೆಯಲ್ಲಿ ಗುಣಮಟ್ಟ ಮತ್ತು ಮೌಲ್ಯಗಳನ್ನು ‌ಕಾಪಾಡಿಕೊಂಡು ಬರುತ್ತಿರುವುದು ಸಂತಸದ ವಿಚಾರವಾಗಿದೆ. 

-ಉಮಾಶಂಕರ್, ಹಳೆ ವಿದ್ಯಾರ್ಥಿ

ಪುಸ್ತಕ ಭಂಡಾರ
ಪುಸ್ತಕ ಭಂಡಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT