ಗುಡಿಬಂಡೆ: ಗ್ರಾಮ ಪಂಚಾಯಿತಿ ಚುನಾವಣೆಯ ನೀತಿಸಂಹಿತೆ ಹಿನ್ನೆಲೆಯಲ್ಲಿ ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸರಳವಾಗಿ ಕನಕದಾಸರ ಜಯಂತಿ ಆಚರಿಸಲಾಯಿತು.
ಕರುನಾಡ ಸಾಹಿತ್ಯ ಪರಿಷತ್ನ ತಾಲ್ಲೂಕು ಅಧ್ಯಕ್ಷೆ ಪರಿಮಳಾ ಮಾತನಾಡಿ, ವಿಶ್ವ ಸಾಹಿತ್ಯಕ್ಕೆ ಭಾರತೀಯ ದಾರ್ಶನಿಕರ ಕೊಡುಗೆ ಅಪಾರವಾದುದು. ಕನಕದಾಸರು ಒಬ್ಬ ಕಾಲಜ್ಞಾನಿ. ಐನೂರು ವರ್ಷಗಳ ಹಿಂದೆಯೇ ಅವರು ಆಡಿದ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದರು.
ಕಾಯಕದ ಆಧಾರದಲ್ಲಿ ಬೆಳೆದುಬಂದ ಜಾತಿ ವ್ಯವಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದೆ. ಸರಳವಾದ ಕೀರ್ತನೆಗಳ ಮೂಲಕ ಕನಕದಾಸರು ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಶ್ರಮಿಸಿದ್ದಾರೆ ಎಂದರು.
ತಹಶೀಲ್ದಾರ್ ಸಿಗಬತ್ತು ಉಲ್ಲಾ ಮಾತನಾಡಿ, ಕನಕದಾಸರ ಕೀರ್ತನೆಗಳು ಗ್ರಾಮೀಣ ಸೊಗಡಿನಿಂದ ಕೂಡಿವೆ. ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿವೆ. ಅವರು ಮುಗ್ಧ ಜನರಲ್ಲಿ ಜ್ಞಾನ ತುಂಬುತ್ತಿದ್ದರು. ಬಸವಣ್ಣನವರ ನಂತರ ಕನಕದಾಸರು ಜಾತಿ ಪದ್ಧತಿ ವಿರುದ್ಧ ಹೋರಾಟ ನಡೆಸಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ಕನಕದಾಸರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ, ಬಿಇಒ ವೆಂಕಟೇಶಪ್ಪ, ಪ.ಪಂ. ಮುಖ್ಯಾಧಿಕಾರಿ ರಾಜಶೇಖರ್, ಟಿಪಿಒ ಶಶಿಕಲಾ, ಚಂದ್ರಶೇಖರ್ ಇದ್ದರು.