ಚಿಕ್ಕಬಳ್ಳಾಪುರ: ಕೋವಿಡ್ನ ಮೊದಲ ಮತ್ತು ಎರಡನೇ ಅಲೆಯಿಂದ ಮೃತಪಟ್ಟ ಪ್ರತಿಯೊಬ್ಬರ ಕುಟುಂಬ ಸದಸ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ₹ 1 ಲಕ್ಷ ಪರಿಹಾರ ನೀಡಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನರಿಗೆ ಮಾತ್ರ ಸಾಯಿ ಕೃಷ್ಣ ಚಾರಿಟೇಬಲ್ ಟ್ರಸ್ಟ್ ಮೂಲಕ ಈ ನೆರವುನೀಡಲಾಗುತ್ತಿದೆ.
ಕಳೆದ ವರ್ಷದ ಲಾಕ್ಡೌನ್ ವೇಳೆಯೂ ಜನರಿಗೆ ನೆರವು ನೀಡಲಾಗಿತ್ತು. ಇಂದಿಗೂ ಹಳ್ಳಿಗಳಲ್ಲಿ ಬಡತನವಿದೆ. ಈ ಸಂದರ್ಭದಲ್ಲಿ ಅವರ ಜತೆ ನಿಂತುಕೊಳ್ಳುವುದು ನಮ್ಮ ಕರ್ತವ್ಯ. ನಾನು ಮತ್ತು ನಮ್ಮ ಎಲ್ಲ ಮುಖಂಡರು ಅವರಿಗೆ ಸಹಕಾರ ನೀಡುತ್ತೇವೆ. ಉಚಿತವಾಗಿ ಪ್ರತಿ ಮನೆಗೂ ಒಂದು ತಿಂಗಳಿಗೆ ಆಗುವಷ್ಟು ಆಹಾರ ಸಾಮಗ್ರಿಗಳನ್ನು ಕಳೆದ ವರ್ಷವೂ ನೀಡಿದ್ದೇವೆ. ಈ ವರ್ಷ ಸಹ ಲಾಕ್ಡೌನ್ ಆಗಿರುವುದರಿಂದ ಆಹಾರದ ಕಿಟ್ ಕೊಡುತ್ತಿದ್ದೇವೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.
ದುರದೃಷ್ಟದಿಂದ ಕೋವಿಡ್ನಿಂದ ಸಾವುಗಳಾಗಿವೆ. ಕೆಲವು ಸಚಿವ ಮಿತ್ರರು ತಮ್ಮ ಕ್ಷೇತ್ರಗಳಲ್ಲಿ ಕೋವಿಡ್ನಿಂದ ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ನೆರವು ನೀಡುತ್ತಿದ್ದಾರೆ. ಆ ಪ್ರಕಾರ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೃತಪಟ್ಟವರ ಕುಟುಂಬಗಳ ಜತೆ ನಾವು ಇದ್ದೇವೆ. ಅವರ ಮನೆಗಳಿಗೆ ತೆರಳಿ ಸಾಂತ್ವನ ಸಹ ಹೇಳಲಾಗುತ್ತಿದೆ. ಜತೆಗೆ ₹ 1 ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ವರ್ಷ 75 ಸಾವಿರ ಆಹಾರದ ಕಿಟ್ಗಳನ್ನು ಜನರಿಗೆ ನೀಡಿದ್ದೆವು. ಈ ಬಾರಿ ಕ್ಷೇತ್ರದಲ್ಲಿ 76 ಸಾವಿರ ಆಹಾರ ಕಿಟ್ಗಳನ್ನು ವಿತರಿಸಲಾಗುತ್ತಿದೆ ಎಂದರು.
ಮಂಚೇನಹಳ್ಳಿ ಹೋಬಳಿ ವ್ಯಾಪ್ತಿಯ ಮಿನಕನಗುರ್ಕಿ, ಜರಬಂಡಹಳ್ಳಿ, ಗೌಡಗೆರೆ, ಹೊನ್ನಪ್ಪನಹಳ್ಳಿ ಮತ್ತಿತರರ ಗ್ರಾಮಗಳಲ್ಲಿನ ಬಡವರು ಮತ್ತು ನಿರ್ಗತಿಕರಿಗೆ ಸಾಯಿ ಕೃಷ್ಣ ಚಾರಿಟೇಬಲ್ ಟ್ರಸ್ಟ್ನಿಂದ ಸಚಿವರು ಆಹಾರದ ಕಿಟ್ಗಳನ್ನು ವಿತರಿಸಿದರು.