ಚಿಂತಾಮಣಿ: ಹಳೆಯ ವೈಷಮ್ಯ ಮತ್ತು ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಇಲ್ಲಿನ ಟಿಪ್ಪುನಗರದಲ್ಲಿ ಶುಕ್ರವಾರ ರಾತ್ರಿ ಯುವಕನೊಬ್ಬನನ್ನು ಕೊಚ್ಚಿಕೊಲೆ ಮಾಡಲಾಗಿದೆ. ಕೊಲೆ ಮಾಡಿರುವ ಆರೋಪಿ ಸ್ವತ: ನಗರಠಾಣೆಗೆ ಆಗಮಿಸಿ ಪೊಲೀಸರಿಗೆ ಶರಣಾಗಿದ್ದಾನೆ.
ನಗರದ ಎನ್.ಎನ್.ಟಿ ರಸ್ತೆಯ ದೇವಾಲಯದ ಹಿಂಭಾಗದಲ್ಲಿ ವಾಸವಾಗಿದ್ದ ಜಬೀರ್ ಪಾಷಾ ಆಲಿಯಾಸ್ ನೇಪಾಳ್(26) ಕೊಲೆಯಾದ ವ್ಯಕ್ತಿ. ಟಿಪ್ಪುನಗರದ ಮುಕ್ತಿಯಾರ್ ಪಾಷಾ ಕೊಲೆ ಮಾಡಿರುವ ಆರೋಪಿ.
ಮುಕ್ತಿಯಾರ್ ಪಾಷಾ ಪತ್ನಿಯೊಂದಿಗೆ ನೇಪಾಳ್ ಅಕ್ರಮ ಸಂಬಂಧ ಹೊಂದಿದ್ದು, ನಿನ್ನ ಪತ್ನಿಗೂ ನನಗೂ ಅಕ್ರಮ ಸಂಬಂಧ ಇದೆ. ಏನು ಮಾಡುತ್ತೀಯೋ ಮಾಡಿಕೋ ಎಂದು ನೇಪಾಳ್ ಬಹಿರಂಗವಾಗಿ ಸವಾಲು ಹಾಕಿದ್ದನು. ಈ ಬಗ್ಗೆ ಹಿಂದೆಯೂ ಹಲವಾರು ಬಾರಿ ಇಬ್ಬರಿಗೂ ಗಲಾಟೆಗಳು ನಡೆದಿದ್ದವು. ಟಿಪ್ಪುನಗರದಲ್ಲಿ ಉರುಸ್ ನಡೆದಿದ್ದ ಸಂದರ್ಭದಲ್ಲೇ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯುಳ್ಳ ನೇಪಾಳ್ ಮಟನ್ ಅಂಗಡಿಯಲ್ಲಿ ಮಾಂಸ ಕಟ್ ಮಾಡುವ ಕೆಲಸ ಮಾಡುತ್ತಿದ್ದನು. ಮುಕ್ತಿಯಾರ್ ಪಾಷಾ ಜಾನುವಾರುಗಳ ವ್ಯಾಪಾರ ಮಾಡುತ್ತಿದ್ದನು. ಶುಕ್ರವಾರ ಮಧ್ಯರಾತ್ರಿ ಟಿಪ್ಪುನಗರದಲ್ಲಿ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ. ಆರೋಪಿ ಮುಕ್ತಿಯಾರ್ ಪಾಷಾ, ನೇಪಾಳ್ ನನ್ನು ಕೊಚ್ಚಿಕೊಲೆ ಮಾಡಿದ ನಂತರ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಟಿಪ್ಪುನಗರದ ಮುಖ್ಯ ರಸ್ತೆಯಲ್ಲೇ ಮುಕ್ತಿಯಾರ್ ಪಾಷಾ ಹರಿತವಾದ ಚಾಕುವಿನಿಂದ ನೇಪಾಳ್ ನ ಎದೆ ಮತ್ತು ಮುಖಕ್ಕೆ ಅನೇಕ ಬಾರಿ ಇರಿದಿದ್ದಾನೆ. ತೀವ್ರವಾದ ರಕ್ತಸ್ರಾವದಿಂದ ನೇಪಾಳ್ ರಸ್ತೆಯಲ್ಲೇ ಮೃತಪಟ್ಟಿದ್ದಾನೆ.
ಡಿವೈಎಸ್ಪಿ ಪಿ.ಮುರಳೀಧರ್, ಇನ್ಸ್ ಸ್ಪೆಕ್ಟರ್ ರಂಗಶಾಮಯ್ಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಟಿಪ್ಪುನಗರದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.