ಶಿಡ್ಲಘಟ್ಟ: ತಾಲ್ಲೂಕಿನ ಮುತ್ತೂರು ಗ್ರಾಮದ ಕೆ.ಎಂ. ಜಯರಾಜ್ ಎಂಬುವರ ಮನೆಯಲ್ಲಿ 300 ವರ್ಷಕ್ಕೂ ಹಳೆಯದಾದ ರಾಟೆ ಬಾವಿ ಇದೆ. ಕರಗದಮ್ಮನ ಬಾವಿ ಎಂದು ಭಾವಿಸಿ ಈಗಲೂ ಪ್ರತಿದಿನ ಬಾವಿಗೆ ದೀಪ ಹಚ್ಚಿ ಪೂಜಿಸಲಾಗುತ್ತಿದೆ. ಸುಣ್ಣಬಣ್ಣ ಬಳಿಸಿ ಬಾವಿಯನ್ನು ಈಗಲೂ ಹಳೆಯ ಸ್ವರೂಪದಲ್ಲೇ ಉಳಿಸಿಕೊಳ್ಳಲಾಗಿದೆ.
‘ನಮ್ಮದು ಕರಗದಮ್ಮನ ಕುಟುಂಬ. ಸುಮಾರು 300ಕ್ಕೂ ಹೆಚ್ಚು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ಬಾವಿ ತೋಡಿದಾಗ ಕೇವಲ ಐದು ಅಡಿ ಆಳದಲ್ಲಿ ನೀರು ಸಿಕ್ಕಿತ್ತಂತೆ. ಬಾವಿ ತೋಡುವಾಗ ಕರಗದಮ್ಮನ ಕುಡಿಕೆಗಳು ಸಿಕ್ಕವಂತೆ. ಅವುಗಳನ್ನು ನಮ್ಮ ಪೂರ್ವಿಕರು ಪೂಜಿಸುತ್ತಿದ್ದರು. ಇದೇ ಕಾರಣಕ್ಕೆ ಬಾವಿ ಪಕ್ಕದಲ್ಲಿ ದೇವಸ್ಥಾನ ಕಟ್ಟಿಸಿದ್ದೇವೆ. ಬಾವಿಯನ್ನು ಕರಗದಮ್ಮನ ಬಾವಿ ಎಂದೇ ಕರೆಯಲಾಗುತ್ತಿದೆ. ಹಿಂದೆ ಹಳ್ಳಿಯ ಅರ್ಧ ಜನರು ನೀರಿಗಾಗಿ ಈ ಬಾವಿಯನ್ನೇ ಅವಲಂಬಿಸಿದ್ದರು’ ಎಂದು ಕೆ.ಎಂ. ಜಯರಾಮ್ ತಿಳಿಸಿದರು.
‘1995ರವರೆಗೆ ನಮ್ಮ ಮನೆಯ ಬಾವಿ ನೀರು ಬಳಸುತ್ತಿದ್ದೆವು. ಅಂತರ್ಜಲ ಕುಸಿದಂತೆ ಬಾವಿಯೂ ಬರಿದಾಯಿತು. ಆದರೆ, ಎರಡು ವರ್ಷಗಳ ಹಿಂದೆ ಉತ್ತಮ ಮಳೆಯಾದ ಕಾರಣ ಸುತ್ತಮುತ್ತಲಿನ ಕೆರೆಗಳಲ್ಲಿ ನೀರು ಹೆಚ್ಚಿದಂತೆ ನಮ್ಮ ಬಾವಿಯಲ್ಲೂ ನೀರು ಕಾಣಿಸಿತ್ತು’ ಎಂದು ವಿವರಿಸಿದರು.
ನಮ್ಮ ಹಳ್ಳಿ ಜನ ನೀರು ಸೇದುವಾಗ ಅವರ ಮನೆ ಕಥೆಗಳು, ಕಷ್ಟ ಸುಖಗಳೆಲ್ಲವೂ ಜೀವಜಲದೊಡನೆ ಸೇರಿ ತಿಳಿಯಾಗುತ್ತಿದ್ದವು. ಹಗ್ಗ ತುಂಡಾಗಿ ಬಿಂದಿಗೆ ಬಾವಿಯಲ್ಲೇ ಉಳಿದರೆ ಅಂತರಗಂಗೆ ತಂದು ಹಗ್ಗದುಂಟೆ ಬಿಟ್ಟು ಬಿಂದಿಗೆ ತೆಗೆಯುವಾಗ ಜನ ಒಗ್ಗೂಡುತ್ತಿದ್ದರು. ಒಟ್ಟಾರೆ ಈ ನೀರು ಸೇದುವ ಬಾವಿ ಕಂಡಾಗ ಆ ದಿನಗಳ ನೆನಪುಗಳು ಕಣ್ಣ ಮುಂದೆ ಬರುತ್ತವೆ ಎಂದು ಭಾವುಕರಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.