ಚಿಕ್ಕಬಳ್ಳಾಪುರ: ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಕೋವಿಡ್ ಸೋಂಕಿತ ಮಹಿಳೆಯ ಅಂತ್ಯಕ್ರಿಯೆ ನಡೆಸಲು ಶುಕ್ರವಾರ ನಗರದ ಪ್ರಶಾಂತ್ ನಗರದಲ್ಲಿರುವ ಮುಸ್ಲಿಮರ ಸ್ಮಶಾನದ ಸುತ್ತಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿದರು.
ಕಾರ್ಖಾನೆ ಪೇಟೆ ರಸ್ತೆ ನಿವಾಸಿ, 56 ವಯಸ್ಸಿನ ಮಹಿಳೆ ಶುಕ್ರವಾರ ಬೆಳಿಗ್ಗೆ ಕೋವಿಡ್ ವಾರ್ಡ್ನಲ್ಲಿ ಮೃತಪಟ್ಟಿದ್ದರು. ಸರ್ಕಾರದ ಮಾರ್ಗಸೂಚಿ ಅನುಸಾರವೇ ಅವರ ಪ್ರಶಾಂತ್ ನಗರದಲ್ಲಿರುವ ಮುಸ್ಲಿಮರ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು.
ಈ ವಿಚಾರ ತಿಳಿಯುತ್ತಲೇ ಸ್ಥಳೀಯ ಜನರು ಸ್ಮಶಾನಕ್ಕೆ ಬಂದು ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿದರು. ತಹಶೀಲ್ದಾರ್, ಉಪವಿಭಾಗಾಧಿಕಾರಿ ಸ್ಥಳಕ್ಕೆ ಬಂದು, ಜಿಲ್ಲಾಧಿಕಾರಿ ದೂರವಾಣಿ ಮೂಲಕ ಜನರಿಗೆ ಮನವಿ ಮಾಡಿದರೂ ಸಾರ್ವಜನಿಕರು ಅಂತ್ಯಕ್ರಿಯೆಗೆ ಒಪ್ಪಲಿಲ್ಲ.
ಕೊನೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ಯೋಗೇಶ್ ಗೌಡ ಅವರು ಅಂತ್ಯಕ್ರಿಯೆ ವಿರೋಧಿಸುತ್ತಿದ್ದ ಜನರ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ ಅಂತ್ಯಕ್ರಿಯೆ ನೆರವೇರಿಸಿದರು.