ಗುಡಿಬಂಡೆ: ‘ಸಾಮಾನ್ಯ ಜನರು ಹಾಗೂ ರೈತರಿಗೆ ಸೌಲಭ್ಯಗಳನ್ನು ಕಲ್ಪಿಸಲು ವಿಫಲವಾದ ಕೇಂದ್ರ ಸರ್ಕಾರ ಈಗ ಇಂಧನ ಬೆಲೆ ಏರಿಕೆ ಮಾಡಿ ಜನರ ಮೇಲೆ ಬರೆಹಾಕಿದೆ’ ಎಂದು ಪ್ರಜಾ ಸಂಘರ್ಷ ಸಮಿತಿಯ ಮುಖ್ಯಸ್ಥ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.
ಪೆಟ್ರೋಲ್, ಡೀಸೆಲ್ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಪ್ರಜಾ ಸಂಘರ್ಷ ಸಮಿತಿ ಬುಧವಾರ ತಾಲ್ಲೂಕು ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 7 ವರ್ಷದಲ್ಲಿ ಹಲವಾರು ಬಾರಿ ಇಂಧನ ಬೆಲೆ ಏರಿಕೆಯಿಂದ ಈಗ ₹100 ಕ್ಕೆ ಏರಿಕೆ ಕಂಡಿದೆ. ಇದರಿಂದ ಜನ ಸಾಮಾನ್ಯರ ಬಳಕೆ ಮಾಡುವ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ, ಜನಜೀವನಕ್ಕೆ ಅಸ್ತವ್ಯಸ್ತವಾಗಿದೆ ಎಂದರು.
ಮೋದಿ ಆಡಳಿತಾವಧಿಯಲ್ಲಿ ಒಂದು ಒಳ್ಳೆಯ ಕೆಲಸ ಮಾಡಿಲ್ಲ. ಬದಲಿಗೆ ಉಪಯುಕ್ತವಾಗದ ವಿಷಯವನ್ನು ತೆಗೆದುಕೊಂಡು ಜನಸಾಮಾನ್ಯರ ಸಮಸ್ಯೆಗಳನ್ನು ಮರೆಮಾಚುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಜಾ ಸಂಘರ್ಷ ಸಮಿತಿ ಅಗತ್ಯ ವಸ್ತುಗಳ ಏರಿಕೆಯ ವಿರುದ್ಧ ಹೋರಾಟ ಶುರು ಮಾಡಿದ್ದು, ಇದು ಕೇವಲ ಆರಂಭ ಮಾತ್ರ. ಸಮಿತಿ ಯಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆಯಿಂದಾಗುವ ದುಷ್ಪರಿಣಾಮಗಳ ಮನವರಿಕೆ ಮಾಡುತ್ತಾ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರಜಾ ಸಂಘರ್ಷ ಸಮಿತಿಯ ಮುಖಂಡ ಶಿವಪ್ಪ, ರಾಜು, ರಾಮರೆಡ್ಡಿ, ವೆಂಕಟರೋಣ, ಮೌಲಾ, ಆನಂದಪ್ಪ, ರಮಣ, ಅಶ್ವತ್ಥಪ್ಪ ಇದ್ದರು.