ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವರಿಸಿದ ಮಂಜು: ಸವಾರರಿಗೆ ಸಂಕಷ್ಟ

Last Updated 13 ನವೆಂಬರ್ 2020, 3:14 IST
ಅಕ್ಷರ ಗಾತ್ರ

ಚೇಳೂರು: ಪಟ್ಟಣದಲ್ಲಿ ಬುಧವಾರ ಮುಂಜಾನೆ ಎದ್ದು ಮನೆಯಿಂದ ಹೊರಟವರಿಗೆ ಕವಿದಿದ್ದ ದಟ್ಟ ಮಂಜು ರಸ್ತೆಯನ್ನು ಮಬ್ಬಾಗಿಸಿತ್ತು. ಈ ವಾತಾವರಣ ಹಲವು ಮಂದಿಯನ್ನು ಪುಳಕಿತಗೊಳಿಸಿತು.

ಈಗ ಗ್ರಾಮೀಣ ಭಾಗದಲ್ಲಿ ಚಳಿಗಾಲದ ಚಿತ್ರಣ ಮೂಡಿದೆ. ಬೆಳಿಗ್ಗೆಯೇ ಸುಣ್ಣದ ತಿಳಿಯಂತೆ ಆಕಾಶದಿಂದ ಕೆಳಗಿಳಿಯುವ ಮಂಜು. ಅದನ್ನು ಭೇದಿಸಿಕೊಂಡು ಮುನ್ನುಗ್ಗಲು ಹೊರಟರೆ ತಲೆಯಿಂದ ಸಣ್ಣಗೆ ಜಿನುಗುವ ಇಬ್ಬನಿ. ಆಕಾಶದಲ್ಲಿ ಸೂರ್ಯ ಬೂದಿಯೊಳಗಿನ ಬೆಂಕಿಯ ಕೆಂಡದಂತೆ ಕಾಣುತ್ತಾನೆ.

ಮಂಜಿನ ಆರ್ಭಟ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ಬೆಳಿಗ್ಗೆ 8ಗಂಟೆಯಾದರೂ ಮಂಜು ಸುರಿಯುತ್ತಲೇ ಇರುತ್ತದೆ. ಇದರಿಂದ ಪಾರಾಗಲು ವಾಹನ ಸವಾರರು ಲೈಟ್‌ಗಳನ್ನು ಹಾಕಿಕೊಂಡು ಸಂಚರಿಸುವುದು ಅನಿವಾರ್ಯವಾಗಿದೆ. ವಾಹನಗಳು ತೀರಾ ಸಮೀಪಕ್ಕೆ ಬರುವ ತನಕವೂ ಕಾಣಿಸುವುದಿಲ್ಲ. ಹಾಗಾಗಿ, ಅ‍ಪಘಾತಗಳಾಗುವ ಆತಂಕವೂ ಸವಾರರಿಗೆ ಕಾಡುತ್ತಿದೆ.

ವಾಯುವಿಹಾರಿಗಳಿಗೆ ಮಂಜು ಮುದ ನೀಡುತ್ತಿದೆ. ಸಂಜೆಯಾಗುತ್ತಿದ್ದಂತೆ ತಣ್ಣಗೆ ಕೊರೆಯುವ ಚಳಿಯಿಂದ ಪಾರಾಗಲು ಜನರು ಕಂಬಳಿ ಹೊದ್ದುಕೊಂಡು ಮಲಗುತ್ತಾರೆ. ಸೂರ್ಯ ಉದಯಿಸಿದರೂ ಚಳಿಯ ಪರಿಣಾಮ ಮನೆಯಲ್ಲಿ ಬೆಚ್ಚಗೆ ಮಲಗುತ್ತಾರೆ. ದಿನಪೂರ್ತಿ ಚಳಿಯ ವಾತಾವರಣ ಕಳೆಯಲು ಮನೆಯ ಕಪಾಟಿನಲ್ಲಿ ಬೆಚ್ಚಿಗೆ ಕುಳಿತಿದ್ದ ಉಲ್ಲನ್ ಹೊದಿಕೆಗಳು ಈಗ ಹೊರಬಂದಿವೆ.

ಈ ವರ್ಷ ಗ್ರಾಮೀಣ ಭಾಗದಲ್ಲಿ ಒಳ್ಳೆಯ ಮಳೆಯಾಗಿದೆ. ವಾತಾವರಣದಲ್ಲಿ ತೇವಾಂಶವೂ ಹೆಚ್ಚಾಗಿದೆ. ವರ್ಷಕ್ಕೊಮ್ಮೆ ಬರುವ ಚಳಿರಾಯ ಒಂದಷ್ಟು ದಿನಗಳು ಗ್ರಾಮೀಣರಿಗೆ ತೊಂದರೆ ಕೊಡುವುದು ನಿಶ್ಚಿತ. ಅತಿಯಾಗಿ ಕಾಡಿ ಕಾಯಿಲೆಗೆ ಕೆಡವಿ ಕಷ್ಟಗಳಿಗೆ ಗುರಿ ಮಾಡದಿರಲಿ ಎಂಬುದು ಗ್ರಾಮೀಣರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT