ಗೌರಿಬಿದನೂರು: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಜಾರಿಗೆ ತಂದ ಅನ್ನಭಾಗ್ಯ ಯೋಜನೆ ಹಾಗೂ ಸಹಕಾರ ಸಪ್ತಾಹದ ಅಂಗವಾಗಿ ಇಂದು ಗ್ರಾಮೀಣ ಭಾಗದ ಜನರು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.
ತಾಲ್ಲೂಕಿನ ನಗರಗೆರೆಯಲ್ಲಿ ಡಿಸಿಸಿ ಬ್ಯಾಂಕ್ನಿಂದ ಆಯೋಜಿಸಿದ್ದ ಸಾಲದ ಪಾಸ್ ಬುಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನ್ಯಭಾಗ್ಯ ಯೋಜನೆ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರತಿ ಮನೆಯ ಹಸಿವು ನೀಗಿಸುತ್ತಿದೆ. ಇದೀಗ ತಾಲ್ಲೂಕಿನ ಜನರ ಸ್ವಾವಲಂಬಿ ಬದುಕಿಗೆ ಸಾಲದ ಸೌಲಭ್ಯ ನೀಡಲು ಮುಂದಾಗಿದ್ದೇವೆ. ಜನತೆಯ ಕಷ್ಟಗಳಿಗೆ ಶಾಶ್ವತ ಪರಿಹಾರ ನೀಡಲು ಶ್ರಮಿಸುತ್ತಿದ್ದೇವೆ. ಜನರು ಆಹಾರದ ಪ್ಯಾಕೆಟ್ ಮತ್ತು ಸೀರೆ ಕೊಟ್ಟು ಜನರನ್ನು ಮರಳು ಮಾಡುವವರನ್ನು ನಂಬಬಾರದು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ‘ಪ್ರತಿ ಕುಟುಂಬದ ಜವಾಬ್ದಾರಿ ಹೊತ್ತಿರುವ ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಬ್ಯಾಂಕ್ ಸದಾ ಸಿದ್ದವಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಗೆರೆ ವ್ಯವಸಾಯ ಸೇವಾ ಸಂಘಗಳ ಅಡಿಯಲ್ಲಿನ ಒಟ್ಟು 38 ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ₹1.90 ಕೋಟಿ ಸಾಲದ ಪಾಸ್ ಬುಕ್ ವಿತರಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮಹಮದ್ ಅಸ್ಲಾಂ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ, ವಿಎಸ್ ಎಸ್ ಎನ್ ಅಧ್ಯಕ್ಷ, ಎ.ಎಸ್.ಲಕ್ಷ್ಮೀಪತಿರೆಡ್ಡಿ, ಕಾರ್ಯದರ್ಶಿ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಚಂದ್ರಶೇಖರ್, ಮುಖಂಡರಾದ ಕೆ.ಎನ್.ಕೇಶವರೆಡ್ಡಿ, ಮಂಜುನಾಥ್ ಭಾಗವಹಿಸಿದ್ದರು.