ಗೌರಿಬಿದನೂರು: ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಭಾನುವಾರ ಮಧ್ಯರಾತ್ರಿ ಉತ್ತಮ ಮಳೆಯಾಗಿದೆ. ಎಲ್ಲೆಡೆ ತಂಪೆರೆಯುವ ಜತೆಗೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಲರಾಶಿ ತುಂಬಿದೆ.
ಮುಂಗಾರು ಆರಂಭವಾದ ಬಳಿಕ ನಿರೀಕ್ಷಿತ ಮಳೆ ಆಗಿರಲಿಲ್ಲ. ರೈತರು ಮಳೆಗಾಗಿ ಕಾಯುತ್ತಿದ್ದರು. ಕೃಷಿ ಚಟುವಟಿಕೆಗಳು ಕುಂಠಿತವಾಗಿದ್ದವು. ಭಾನುವಾರ ರಾತ್ರಿ ಬಿದ್ದ ಆದ್ರಿ ನಕ್ಷತ್ರದ ಉತ್ತಮ ಮಳೆಯಿಂದ ತಾಲ್ಲೂಕಿನ ಬಹುತೇಕ ಭಾಗದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಲಿವೆ.
ಕೆಲವೆಡೆಗಳಲ್ಲಿ ಕೃಷಿ ಭೂಮಿಗಳಲ್ಲಿ ನೀರು ತುಂಬಿದೆ. ಬಿತ್ತನೆ ಕಾರ್ಯಕ್ಕೆ ಸಾಧ್ಯವಾಗಿಲ್ಲ. ಬಹುತೇಕ ತಗ್ಗು ಪ್ರದೇಶಗಳು ಮಳೆ ನೀರಿನಿಂದ ಆವೃತವಾಗಿವೆ.
ತಾಲ್ಲೂಕಿನ ತರಿದಾಳು ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿದೆ. 20 ವರ್ಷಗಳ ಬಳಿಕ ಕೋಡಿ ಹರಿದಿದೆ. ಇದನ್ನ ನೋಡಲು ಸ್ಥಳೀಯರು ಸೋಮವಾರ ಮುಗಿಬಿದ್ದಿದ್ದರು. ಯುವಕರು ಕೆರೆ ಕೋಡಿಯಲ್ಲಿ ನೀರು ಹರಿಯುವ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು.
ತೊಂಡೇಬಾವಿ ಹೋಬಳಿಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಕುಮದ್ವತಿ ನದಿಯಲ್ಲಿ ನೀರು ಹರಿದಿದೆ.