ಚಿಂತಾಮಣಿ: ತಾಲ್ಲೂಕಿನ ಬಡಗವಾರಹಳ್ಳಿ ಬಳಿ ಶ್ರೀಗಂಧವನ್ನು ಕದ್ದು ಸಾಗಿಸುತ್ತಿದ್ದ ಗುಂಪಿನ ಮೇಲೆ ದಾಳಿ ನಡೆಸಿರುವ ಪೊಲೀಸರು ಇಬ್ಬರನ್ನು ಬಂಧಿಸಿ, ₹ 1.36 ಲಕ್ಷ ಮೌಲ್ಯದ 91 ಕೆ.ಜಿ ಶ್ರೀಗಂಧ ವಶಪಡಿಸಿಕೊಂಡಿದ್ದಾರೆ.
ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶ್ರೀನಿವಾಸಪ್ಪ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಕೆರೆಯ ಅಂಗಳಕ್ಕೆ ತೆರಳಿ ಪರಿಶೀಲಿಸಿದಾಗ ಗಂಧದ ಮರಗಳನ್ನು ಕದಿಯುತ್ತಿರುವುದು ಕಾಣಿಸಿದೆ. ತಂಡದಲ್ಲಿದ್ದ ಮತ್ತಿಬ್ಬರು ತಪ್ಪಿಸಿಕೊಂಡು ಹೋಗಿದ್ದಾರೆ.
ಬಶೆಟ್ಟಹಳ್ಳಿ ಹೋಬಳಿಯ ದೊಡ್ಡತೇಕಹಳ್ಳಿ ಗ್ರಾಮದ ಗಜೇಂದ್ರ, ಬಡಗವಾರಹಳ್ಳಿ ಗ್ರಾಮದ ವೆಂಕಟಸ್ವಾಮಿ ಬಂಧಿತರು. ಬಡಗವಾರಹಳ್ಳಿ ಗ್ರಾಮದ ಪ್ರಸಾದ್, ಕೋಲಾರ ತಾಲ್ಲೂಕಿನ ಕಾಕಿನೆತ್ತ ಗ್ರಾಮದ ಮುನಿರಾಜು ಪರಾರಿಯಾಗಿದ್ದಾರೆ.
ಆರೋಪಿಗಳು ಬೇರೆಡೆಯಿಂದ ಶ್ರೀಗಂಧ ಕದ್ದು ತಂದು ಇಲ್ಲಿ ಕತ್ತರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಬ್ಇನ್ಸ್ಪೆಕ್ಟರ್ ನರೇಶನಾಯಕ್, ಎಸ್.ನಾರಾಯಣಸ್ವಾಮಿ, ಸಿಬ್ಬಂದಿ ಸಿ.ಜಗದೀಶ್, ನರಸಿಂಹಯ್ಯ, ರಾಜೇಶ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.