ಚಿಕ್ಕಬಳ್ಳಾಪುರ: ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಅಂಗವಾಗಿ ಭಾನುವಾರ ಬಿಜೆಪಿ ಯುವ ಮೋರ್ಚಾದಿಂದ ತಾಲ್ಲೂಕಿನ ಅಗಲಗುರ್ಕಿ ಬೆಟ್ಟದಲ್ಲಿ ಬೀಜದ ಉಂಡೆಗಳನ್ನು ಪ್ರಸರಣ ಮಾಡಲಾಯಿತು. ಸುಮಾರು 8,000 ಬೀಜದ ಉಂಡೆಗಳನ್ನು ತಯಾರಿಸಿ ಬೆಟ್ಟದ ತುದಿಯಲ್ಲಿ ಎಸೆಯಲಾಯಿತು.
ಈಗ ಮಳೆಗಾಲ ಆರಂಭವಾಗಿದೆ. ಬೀಜದ ಉಂಡೆಗಳನ್ನು ಪ್ರಸರಣ ಮಾಡಿದರೆ ಮೊಳಕೆಯೊಡೆದು ಬೆಳೆಯುತ್ತವೆ. ಬೀಜ ಪ್ರಸರಣಕ್ಕೆ ಇದು ಸಕಾಲ. ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳುವ ಮೂಲಕ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಣಜಿತ್ ಕುಮಾರ್ ತಿಳಿಸಿದರು.
ಪರಿಸರವನ್ನು ಉಳಿಸಿ ಬೆಳೆಸಬೇಕು. ವಾತಾವರಣವನ್ನು ಕಾಪಾಡಿದರೆ ನಮ್ಮ ಭವಿಷ್ಯವನ್ನು ಪರಿಸರ ಕಾಪಾಡುತ್ತದೆ ಎಂದು ಹೇಳಿದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಭಿಷೇಕ್, ಉಪಾಧ್ಯಕ್ಷ ಸದಾಶಿವ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬಾಗೇಪಲ್ಲಿ ಸತೀಶ್ ಹಾಗೂ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.