ಚಿಕ್ಕಬಳ್ಳಾಪುರ: ಶ್ರಾವಣ ಮಾಸದ ಮೂರನೇ ಶನಿವಾರದ ಪ್ರಯುಕ್ತ ನಗರದ ಕಂದವಾರ ಬಾಗಿಲು ಬಳಿ ಇರುವ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ಭಕ್ತರು ಬೆಳಿಗ್ಗೆಯಿಂದಲೇ ದರ್ಶನ ಪಡೆಯುತ್ತಿದ್ದ ದೃಶ್ಯಗಳು ಕಂಡುಬಂದವು.
ಬಿ.ಬಿ.ರಸ್ತೆಯಲ್ಲಿರುವ ಶನೈಶ್ವರ ಸ್ವಾಮಿ ದೇವಾಲಯ, ಕಂದವಾರ ಪೇಟೆಯಲ್ಲಿರುವ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನ, ಗಂಗಮ್ಮನಗುಡಿ ರಸ್ತೆಯಲ್ಲಿರುವ ವಾಸವಿ ದೇವಾಲಯ ಸೇರಿದಂತೆ ನಗರದ ವಿವಿಧೆಡೆ ಇರುವ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಭಕ್ತರು ಪೂಜೆ ಸಲ್ಲಿಸಿ, ದರ್ಶನ ಪಡೆದರು.
ಶನಿವಾರ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸುವ ಜತೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಜತೆಗೆ ತೀರ್ಥ, ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಭಕ್ತರು ದೈವದ ಚಿನ್ಹೆಯಾದ ನಾಮವನ್ನು ಹಣೆ ಮೇಲೆ ಧರಿಸಿಕೊಳ್ಳುತ್ತಿದ್ದದ್ದು ಕಂಡುಬಂತು.
ಬಿ.ಬಿ.ರಸ್ತೆಯಲ್ಲಿರುವ ಶನೈಶ್ವರ ಸ್ವಾಮಿ ದೇವಾಲಯ, ಕಂದವಾರ ಪೇಟೆಯಲ್ಲಿರುವ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನಗಳಿಗೆ ದಿನವೀಡಿ ಭಕ್ತರ ಭೇಟಿ ನಡದೇ ಇತ್ತು. ದೇವಾಲಯದಲ್ಲಿ ಬೆಳಿಗ್ಗೆ 5.30ರಿಂದ 6.30ರ ವರೆಗೆ ಅಭಿಷೇಕ ಮತ್ತು ಸುಪ್ರಭಾತ ಸೇವೆ ನಡೆದವು. ಕೋವಿಡ್ ಕಾರಣಕ್ಕೆ ಭಕ್ತರ ಸಂಖ್ಯೆ ಕಡಿಮೆ ಇತ್ತು. ತೀರ್ಥ ಪ್ರಸಾದ ವ್ಯವಸ್ಥೆ ಮಾಡಿರಲಿಲ್ಲ.