ಶಿಡ್ಲಘಟ್ಟ: ತಾಲೂಕಿನ ಬೂದಾಳ ಗ್ರಾಮದ ಬಳಿ ಇರುವ ಮಲ್ಲಿ ಮಲ್ಲೇಶ್ವರ ದೇವಸ್ಥಾನ ಹಾಗೂ ಶಿಡ್ಲಘಟ್ಟ ನಗರದ ಆಂಜನೇಯ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದೆ.
ಬೂದಾಳದ ಮಲ್ಲಿ ಮಲ್ಲೇಶ್ವರ ದೇವಾಲಯದಲ್ಲಿ ಸಿಸಿ ಕ್ಯಾಮೆರಾ ಕಿತ್ತು ಬಿಸಾಡಿದ್ದಾರೆ. ನಂತರ ಎರಡು ಬಾಗಿಲುಗಳನ್ನು ಕಿತ್ತಿರುವ ಕಳ್ಳರು ಗರ್ಭ ಗುಡಿಯ ಕಬ್ಬಿಣದ ಬಾಗಿಲನ್ನು ಕಿತ್ತು ಹಾಕುವ ಪ್ರಯತ್ನ ಸಫಲವಾಗಿಲ್ಲ.
ಆಂಜನೇಯ ದೇವಸ್ಥಾನದಲ್ಲಿ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಹುಂಡಿಯಲ್ಲಿದ್ದ ಹಣ ದೋಚಿದ್ದಾರೆ. ಲುಂಗಿ ಕಟ್ಟಿಕೊಂಡು ಬಂದಿದ್ದ ಮೂವರು ಕಳ್ಳರು ಕಳ್ಳತನ ಮಾಡಿರುವುದು ಆಂಜನೇಯ ದೇವಸ್ಥಾನದಲ್ಲಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಲ್ಲಿ ಮಲ್ಲೇಶ್ವರ ದೇವಾಲಯದಲ್ಲೂ ಇದೇ ಕಳ್ಳರ ಗುಂಪು ಕಳವು ಮಾಡಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದ್ದು, ತನಿಖೆಯಿಂದ ತಿಳಿಯಬೇಕಿದೆ.
ಆಂಜನೇಯ ದೇವಸ್ಥಾನಕ್ಕೆ ಶಿಡ್ಲಘಟ್ಟ ನಗರ ಠಾಣೆಯ ಪೊಲೀಸರು ಹಾಗೂ ಮಲ್ಲಿ ಮಲ್ಲೇಶ್ವರ ದೇವಸ್ಥಾನಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿಡ್ಲಘಟ್ಟ–ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ 234ರ ಸಂಚಾರ ದಟ್ಟಣೆ ಹೆಚ್ಚಾಗಿ ಇರುವ ಮಾರ್ಗದಲ್ಲಿ ಕಳ್ಳತನ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.