ಚಿಕ್ಕಬಳ್ಳಾಪುರ: 'ಯಾರ ಕಾಲು ಹಿಡಿದರೂ ಪರವಾಗಿಲ್ಲ. ಮತ್ತೆ ಮುಖ್ಯಮಂತ್ರಿ ಆಗಬೇಕು ಇಲ್ಲವೇ ಕೇಂದ್ರ ಸಚಿವನಾಗಬೇಕು ಎನ್ನುವುದು ಎಚ್.ಡಿ.ಕುಮಾರಸ್ವಾಮಿ ಅವರ ಮನಸ್ಥಿತಿ’ ಎಂದು ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯಿಲಿ ಟೀಕಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ನಾಯಕತ್ವದ ಗುಣ ಇತ್ತು. ಆದರೆ ಅವರ ನಿಲುವುಗಳು ಅವರ ವ್ಯಕ್ತಿತ್ವ ಮತ್ತು ವರ್ಚಸ್ಸು ಕಳೆಯುತ್ತಿವೆ ಎಂದು ವಿಶ್ಲೇಷಿಸಿದರು.
‘ನನ್ನ ರಾಜಕೀಯ ಅನುಭವದ ಪ್ರಕಾರ ಜೆಡಿಎಸ್ ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತದೆಯೋ ಅವರಿಗೆ ಸುಖ ಇಲ್ಲ. ಅವರ ಸ್ನೇಹದಿಂದ ಮತ್ತೆ ಗುಂಡಿಗೆ ಹೋಗುತ್ತೇವೆಯೇ ಹೊರತು ಉದ್ಧಾರ ಆಗುವುದಿಲ್ಲ. ಒಂದು ವೇಳೆ ಬಿಜೆಪಿ ಉದ್ಧಾರ ಆಗುವುದಿದ್ದರೆ ಆಗಲಿ’ ಎಂದರು.
ಕಾಂಗ್ರೆಸ್ ಹಾಗೂ ಮೈತ್ರಿಕೂಟವು ನಿತೀಶ್ ಕುಮಾರ್ ಅವರನ್ನು ನಂಬಿಕೊಂಡೇ ಇಲ್ಲ. ಅವರನ್ನು ನಂಬಿಕೊಂಡಿದ್ದರೆ ತಿಕ್ಕಾಟ ಆಗುತ್ತಿತ್ತು. ಮಮತಾ ಬ್ಯಾನರ್ಜಿ ಯಾವತ್ತೂ ಬಿಜೆಪಿ ಪರವಾಗಿ ಇಲ್ಲ. ಸದಾ ಬಿಜೆಪಿ ಪರವಾಗಿ ಇದ್ದ ನಿತೀಶ್ ಅವರದ್ದು ಅತಂತ್ರ ಮನಸ್ಥಿತಿ ಎಂದು ಮೊಯಿಲಿ ಟೀಕಿಸಿದರು.