ಕೊಪ್ಪ: ಕೃಷಿ ಸಂಬಂಧಿತ ತಿದ್ದುಪಡಿ ಕಾಯ್ದೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಶೃಂಗೇರಿ ಕ್ಷೇತ್ರ ರೈತ ಸಂಘ ಹಾಗೂ ಹಸಿರು ಸೇನೆ ತಹಶೀಲ್ದಾರ್ ಪರಮೇಶ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
‘ಕೃಷಿ ಸಂಬಂಧಿತ ಭೂಕಾಯ್ದೆ ತಿದ್ದುಪಡಿಗಳಿಂದ ನಮ್ಮ ರೈತಾಪಿ ವರ್ಗ ಹಾಗೂ ಮಾರುಕಟ್ಟೆಗಳು ಖಾಸಗಿ ವ್ಯಾಪಾರಿಗಳ ಮತ್ತು ಕಾರ್ಪೊರೇಟ್ ಸಂಸ್ಥೆಗಳ ನಿಯಂತ್ರಣ ಕ್ಕೆ ಒಳಗಾಗುತ್ತಿವೆ’ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ, ಹಸಿರುಸೇನೆ ಅಧ್ಯಕ್ಷ ಬಿ.ಪಿ.ಚಿಂತನ್ ಬೆಳಗೊಳ, ಪಟ್ಟಣ ಪಂಚಾಯಿತಿ ಸದಸ್ಯ ರಷೀದ್, ಚಂದ್ರಶೇಖರ್, ಈವನ್ ಜೋಯಲ್, ಪ್ರಶಾಂತ್, ಅಂಜನ್ ಇದ್ದರು.
ಸರ್ಕಾರಕ್ಕೆ ಮನವಿ
ಶೃಂಗೇರಿ: ರೈತ ವಿರೋಧಿ ಕಾಯ್ದೆ ಮತ್ತು ವಿದ್ಯುತ್ ಖಾಸಗೀರಣಗೊಳಿಸುವುದನ್ನು ವಿರೋಧಿಸಿಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದಿಂದ ಶೃಂಗೇರಿ ತಹಶೀಲ್ದಾರ್ ಅಂಬುಜಾ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಅಧ್ಯಕ್ಷ ಕಾನೋಳ್ಳಿ ಚಂದ್ರಶೇಖರ್ ಮಾತನಾಡಿ, ‘1972ರಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ರೈತರ ಪರವಾಗಿತ್ತು. ಪ್ರಸ್ತುತ ಭೂ ಸುಧಾರಣೆ ತಿದ್ದುಪಡಿಯಿಂದ ಉಳ್ಳವರು ಹಾಗೂ ಇಲ್ಲದವರ ನಡುವೆ ಕೋಲಾಹಲವನ್ನು ಸೃಷ್ಟಿಸಿ, ರೈತರ ಮರಣ ಶಾಸನಕ್ಕೆ ಸರ್ಕಾರ ಮುನ್ನುಡಿ ಬರೆಯುತ್ತಿದೆ’ ಎಂದು ಆರೋಪಿಸಿದರು.
ರೈತ ಸಂಘದ ಉಪಾಧ್ಯಕ್ಷ ಎಂ.ಎಸ್ ಚೆನ್ನಕೇಶವ ಮಾತನಾಡಿದರು.
ರೈತ ಸಂಘದ ಕಾರ್ಯಧ್ಯಕ್ಷ ಮೆಣಸೆ ಅನಂತಯ್ಯ ಮಾತನಾಡಿದರು. ರೈತ ಸಂಘದ ಪದಾಧಿಕಾರಿಗಳಾದ ಯೋಗಪ್ಪ ನರ್ಕುಳಿ, ಅತ್ತುಳ್ಳಿ ಧರ್ಮಪ್ಪ, ಕಲ್ಲಾಳಿ ನಾಗೇಶ್, ಪ್ರಶಾಂತ್, ಮುರುಳಿ ಇದ್ದರು.