ತರೀಕೆರೆ: ತಾಲ್ಲೂಕಿನ ಎಂ.ಸಿ.ಹಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಯನ್ನು ರಸ್ತೆ ಮಧ್ಯೆ ಇಟ್ಟಿದ್ದ ಪ್ರಕರಣವು ತಾಲ್ಲೂಕು ಆಡಳಿತದ ಮಧ್ಯಪ್ರವೇಶದಿಂದಾಗಿ ಶಾಂತ ರೀತಿಯಿಂದ ಬಗೆಹರಿದಿದೆ.
ರಾಷ್ಟ್ರೀಯ ಹೆದ್ದಾರಿ 206ರಲ್ಲಿರುವ ಎಂ.ಸಿ.ಹಳ್ಳಿ ಗ್ರಾಮದಲ್ಲಿನ ಭದ್ರಗಿರಿ ದೇವಸ್ಥಾನಕ್ಕೆ ಹೋಗುವ ಮಹಾದ್ವಾರದ ರಸ್ತೆ ಮಧ್ಯೆ ಸುಮಾರು 20 ಅಡಿ ಎತ್ತರವುಳ್ಳ ಹೊದಿಕೆ ಹಾಕಲಾಗಿದ್ದ ಸ್ಥಿತಿಯಲ್ಲಿದ್ದ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಇಡಲಾಗಿತ್ತು.
ವಿಷಯ ತಿಳಿದು ಸ್ಥಳಕ್ಕೆ ಬಂದ ತಹಶೀಲ್ದಾರ್ ಸಿ.ಜಿ.ಗೀತಾ, ಡಿವೈಎಸ್ಪಿ ರೇಣುಕ ಪ್ರಸಾದ್, ಪೊಲೀಸ್ ಇನ್ಸ್ಪೆಕ್ಟರ್ ಸುರೇಶ್ ಅವರು ಗ್ರಾಮದ ದಲಿತ ಸಂಘಟನೆಯೊಂದಿಗೆ ಮಾತುಕತೆ ನಡೆಸಿ, ಪ್ರತಿಮೆಯನ್ನು ತೆರವು ಮಾಡಲಾಗಿದ್ದು ಮಹಾದ್ವಾರದ ಪಕ್ಕದಲ್ಲಿನ ಸ್ಥಳದಲ್ಲಿ ಇರಿಸಲಾಗಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ತಹಶೀಲ್ದಾರ್, ‘ಪ್ರತಿಮೆ ಸ್ಥಾಪನೆಗೆ ಅನುಮತಿ ಪಡೆದಿರಲಿಲ್ಲ. ಹೆದ್ದಾರಿ ಮಧ್ಯೆ ಇಟ್ಟಿರುವುದು ಸರಿಯಲ್ಲ. ಪ್ರತಿಮೆ ಸ್ಥಾಪನೆಗೆ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಬೇರೆ ಸ್ಥಳದಲ್ಲಿ ಸ್ಥಾಪಿಸಲಿ ಎಂದು ಗ್ರಾಮದ ಮುಖಂಡರಿಗೆ ತಿಳಿಸಲಾಗಿದೆ’ ಎಂದು ಹೇಳಿದರು.
ಮಾದಿಗ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ‘ಹೆದ್ದಾರಿ ವಿಸ್ತರಣೆಯಾದ ನಂತರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತವನ್ನು ಮಾಡಿ, ತಾಲ್ಲೂಕು ಆಡಳಿತವು ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ’ ಎಂದು ಹೇಳಿದರು.
ಮುಖಂಡ ಸುರೇಶ್ ಪಾಪಣ್ಣ, ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸುನೀಲ್, ರಾಮಚಂದ್ರಪ್ಪ, ಓಂಕಾರಪ್ಪ, ಗಿರೀಶ್ ಸ್ಥಳದಲ್ಲಿದ್ದರು.