ನರಸಿಂಹರಾಜಪುರ: ಜನಸಾಮಾನ್ಯರ ಕಣ್ಣೀರು ಅರ್ಥ ಮಾಡಿಕೊಳ್ಳದ ವಿಕೃತ ಮನಸ್ಥಿಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೊಂದಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆರೋಪಿಸಿದರು.
ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಸಂದರ್ಭದಲ್ಲಿ ಆಮ್ಲಜನಕ ಸಿಗದೆ ಮೃತಪಟ್ಟ ವ್ಯಕ್ತಿಯ ಮಗು, ತನ್ನ ಕಷ್ಟವನ್ನು ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಬಳಿ ಹೇಳಿಕೊಳ್ಳುವಾಗ ಭಾವುಕರಾಗಿ ಕಣ್ಣೀರು ಹಾಕಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಅಸ್ಕರ್ ಪ್ರಶಸ್ತಿ ನೀಡಬೇಕು ಎಂದು ಸಿ.ಟಿ.ರವಿ ಹಾಸ್ಯ ಮಾಡಿದ್ದಾರೆ. ಇದು ಅವರ ವಿಕೃತ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದರು.
‘ಆ ಮಗುವು ತಂದೆಯನ್ನು ಕಳೆದುಕೊಳ್ಳಲು ಆಮ್ಲಜನಕ ಕೊರತೆ ಕಾರಣವಾಗಿದ್ದು, ಬಿಜೆಪಿ ಸರ್ಕಾರ ಮಗುವಿನ ಪೋಷಕರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದೆಯೇ? ಎಂಬುದನ್ನು ಮೊದಲು ಸಿ.ಟಿ.ರವಿ ತಿಳಿದುಕೊಳ್ಳಲಿ. ಕೋವಿಡ್ನಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಕಾಂಗ್ರೆಸ್ನಿಂದ ₹1ಲಕ್ಷ ಪರಿಹಾರ ನೀಡಲಾಗಿದೆ’ ಎಂದರು.
ಪರಮೇಶ್ ಮೇಸ್ತ್ರ ಸಾವು ಆಕಸ್ಮಿಕ ಎಂದು ಸಿಬಿಐ ವರದಿ ನೀಡಿದೆ. ಅಲ್ಲದೆ ಡಿ.ಕೆ.ರವಿ, ಡಿವೈಎಸ್ಪಿ ಗಣಪತಿ ವಿಚಾರದಲ್ಲೂ ಸಿಬಿಐ ವರದಿ ನೀಡಿದ್ದು, ಇದರಲ್ಲಿ ಅಂದಿನ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದು ಹೇಳಿದೆ.ಆದರೆ, ಸಿಬಿಐ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲ’ ಎಂದು ದೂರಿದರು.