ಚಿಕ್ಕಮಗಳೂರು: ಮಳೆ ಕೊರತೆಯಿಂದ ಬರಗಾಲ ಎದುರಿಸಿದ ಜಿಲ್ಲೆಯ ಜನ ಕಳೆದ ವಾರ ಅಲ್ಲಲ್ಲಿ ಸುರಿದ ಮಳೆಯಿಂದ ಹೊಸ ನಿರೀಕ್ಷೆ ಕಟ್ಟಿಕೊಟ್ಟಿದ್ದಾರೆ. ಮುಂಗಾರು ಪೂರ್ವ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕೃಷಿ ಇಲಾಖೆ ಕೂಡ ಸಜ್ಜಾಗಿದೆ.
ಕಳೆದ ವರ್ಷ ಮುಂಗಾರು ತಡವಾಗಿ ಆರಂಭವಾಗಿತ್ತು. ಹಿಂಗಾರು ಕೂಡ ಕೈಕೊಟ್ಟಿತ್ತು. ಇದರಿಂದ ಮಲೆನಾಡಿನಲ್ಲೂ ಬರಗಾಲದ ಸ್ಥಿತಿ ಇತ್ತು. ಬೆಳೆ ಉಳಿಸಿಕೊಳ್ಳಲು ಜನ ಪರದಾಡಿದರು. ಬಿಸಿಲು ಹೆಚ್ಚಾಗಿ ದಾಖಲೆಯ ಉಷ್ಣಾಂಶ ಕೂಡ ದಾಖಲಾಗಿತ್ತು.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ಅಶ್ವಿನಿ ಮಳೆ ರೈತರಲ್ಲಿ ಹರ್ಷ ತಂದಿದೆ. ಮಳೆ ನಡುವೆ ಮೋಡ ಕವಿದ ವಾತಾವರಣ ಇರುವುದರಿಂದ ಮಳೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಮುಂಗಾರು ಪೂರ್ವ ಬಿತ್ತನೆಗೆ ಬಗ್ಗೆ ಆಸಕ್ತಿ ತೋರಿಸಿದ್ದಾರೆ.
ಬಯಲುಸೀಮೆ ಪ್ರದೇಶಗಳಾದ ಕಡೂರು, ಅಜ್ಜಂಪುರ, ತರೀಕೆರೆ ಮತ್ತು ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಮುಂಗಾರು ಪೂರ್ವದಲ್ಲಿ ಎಳ್ಳು, ಹೆಸರು, ಅಲಸಂದೆ, ಉದ್ದು, ನೆಲಗಡಲೆ, ಸೂರ್ಯಕಾಂತಿ ಬಿತ್ತನೆ ಮಾಡಲಾಗುತ್ತದೆ. ಅದಕ್ಕಾಗಿ ಭೂಮಿ ಹದಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮಂತ್ತೊದು ಸುತ್ತಿನ ಮಳೆಗೆ ಕಾಯುತ್ತಿದ್ದಾರೆ.
1,150 ಹೆಕ್ಟೇರ್ ಪ್ರದೇಶದಲ್ಲಿ ಅಲಸಂದೆ, 800 ಹೆಕ್ಟೇರ್ ಉದ್ದು, 1,900 ಹೆಕ್ಟೇರ್ ಹೆಸರು, 2,300 ಹೆಕ್ಟೇರ್ ನೆಲಗಡಲೆ, 2,700 ಹೆಕ್ಟೇರ್ ಎಳ್ಳು, 1,500 ಹೆಕ್ಟೇರ್ ಸೂರ್ಯಕಾಂತಿ ಬಿತ್ತನೆಯ ಗುರಿ ಇಟ್ಟುಕೊಂಡಿದೆ. ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ ಹಾಗೂ ಅರುಣೋದಯ ಖಾಸಗಿ ಬಿತ್ತನೆ ಬೀಜ ಸಂಸ್ಥೆಗೆ ಒಟ್ಟು 1,108 ಟನ್ ಬಿತ್ತನೆ ಬೀಜಕ್ಕೆ ಕೃಷಿ ಇಲಾಖೆ ಕೋರಿಕೆ ಸಲ್ಲಿಸಿದೆ. ಅದರಲ್ಲಿ ನೆಲಗಡಲೆ 875 ಟನ್, ಹೆಸರು 55, ತೊಗರಿ 24, ಉದ್ದು 6, ಅಲಸಂದೆ 79, ಸೂರ್ಯಕಾಂತಿ 69 ಟನ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಮುಂಗಾರು ಪೂರ್ವ ಬಿತ್ತನಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲಸಂದೆ ಬಿತ್ತನೆ ಬೀಜ ಈಗಾಗಲೇ ದಾಸ್ತಾನಿದೆ. ಸೋಮವಾರದ ವೇಳೆ ಉಳಿದ ಬಿತ್ತನೆ ಬೀಜವೂ ಬರಲಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಪೂರೈಕೆ ಮಾಡಲಾಗುವುದು.–ಎಚ್.ಎಲ್.ಸುಜಾತಾ ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.