ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾ ಹಿನ್ನೀರಿನಲ್ಲಿ ತಗ್ಗಿದ ಮೀನು ಶಿಕಾರಿ

ಮಾರುಕಟ್ಟೆಗೆ ಮೀನು ಪೂರೈಕೆ ಇಳಿಕೆ; ಬೇಡಿಕೆ ಕಡಿಮೆಯಾದ್ದರಿಂದ ಬೆಲೆ ಯಥಾಸ್ಥಿತಿ
ಕೆ.ವಿ.ನಾಗರಾಜ್
Published 22 ಮಾರ್ಚ್ 2024, 6:56 IST
Last Updated 22 ಮಾರ್ಚ್ 2024, 6:56 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕಿನ ಭದ್ರಾ ಹಿನ್ನೀರಿನಲ್ಲಿ ನೀರು ಕಡಿಮೆಯಾಗಿದ್ದು, ಮೀನಿನ ಶಿಕಾರಿ ತಗ್ಗಿದೆ. ಹಾಗಾಗಿ ಮಾರುಕಟ್ಟೆಗೆ ಪೂರೈಕೆಯಾಗುವ ಮೀನಿನ ಪ್ರಮಾಣ ಕುಸಿದಿದೆ.  ಆದರೆ, ಮಳೆಗಾಲಕ್ಕೆ ಹೋಲಿಸಿದರೆ ಹಿನ್ನೀರಿನ ಮೀನುಗಳಿಗೆ ಬೇಸಿಗೆಯಲ್ಲಿ ಬೇಡಿಕೆ ಕಡಿಮೆ ಇರುವುದರಿಂದ ಬೆಲೆಯಲ್ಲಿ ದೊಡ್ಡ ಮಟ್ಟದ ವ್ಯತ್ಯಾಸ ಆಗಿಲ್ಲ.

ಮಳೆಗಾಲದಲ್ಲಿ ಭದ್ರಾ ಹಿನ್ನೀರಿನಲ್ಲಿ ಗರಿಷ್ಠ ಪ್ರಮಾಣದ ಮೀನು ಶಿಕಾರಿ ನಡೆಯುತ್ತದೆ. ಆಗ ಬೇಡಿಕೆಯೂ ಹೆಚ್ಚಿರುತ್ತದೆ. ಈಗ ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ಮೀನು ನೀರಿನ ಆಳಕ್ಕೆ ಹೋಗಿರುತ್ತದೆ. ಹಾಗಾಗಿ ಶಿಕಾರಿ ಕಡಿಮೆಯಾಗಿದೆ ಎನ್ನುತ್ತಾರೆ ಮೀನು ಮಾರಾಟಗಾರರು. ಭದ್ರಾ ಹಿನ್ನೀರನ್ನು ಬಿಟ್ಟಾಗ ಶಿಕಾರಿ ಕಡಿಮೆಯಾಗುತ್ತದೆ. ನೀರನ್ನು ಬಿಡದಿದ್ದಾಗ ಶಿಕಾರಿ ಹೆಚ್ಚಾಗುತ್ತದೆ. ಮಳೆಗಾಲಕ್ಕೆ ಹೋಲಿಸಿದರೆ ಈಗ ಮೀನಿನ ಬೇಡಿಕೆ ಶೇ70ರಷ್ಟು ಕುಸಿದಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ಹಿನ್ನೀರಿನಲ್ಲಿ ಸಿಗುವ ಗೌರಿ, ಗೋಜಲೆ, ಮಿರ್ಗಾಲ್, ಅವುಲ್ ಮೀನು ಮಾರಾಟಕ್ಕೆ ಬರುತ್ತಿವೆ. ಗೌರಿ ಮತ್ತು ಅವುಲ್ ಮೀನಿಗೆ ಬೇಡಿಕೆಯಿದೆ. ಅವುಲ್ ಮೀನು ಬಹಳ ರುಚಿಕರ ಹಾಗೂ ಅಪರೂಪಕ್ಕೆ ಸಿಗುವ ಮೀನಾಗಿದೆ. ಹಿನ್ನೀರಿನಲ್ಲಿ ಲಭ್ಯವಾಗುವ ಮೀನಿನ ಜತೆಗೆ ಭದ್ರಾವತಿ ಮಾರುಕಟ್ಟೆಯಿಂದಲೂ ಕೆರೆಯ ಮೀನು ನಗರದ ಮಾರುಕಟ್ಟೆಗೆ ಪೂರೈಕೆಯಾಗುತ್ತದೆ. ಆದರೆ, ಕೆರೆ ಮೀನು ಬಳಸುವವರ ಸಂಖ್ಯೆ ಕಡಿಮೆಯಿದೆ. ಮಳೆಗಾಲದಲ್ಲಿ ಗೊಜಲೆ ಮತ್ತು ಗಿರ್ಲ್ ಮೀನುಗಳು ಮುಂಬೈ ಮಾರುಕಟ್ಟೆಗೂ ಹೋಗುತ್ತವೆ. ಈಗ ಸ್ಥಳೀಯವಾಗಿ ಮಾತ್ರ ಹಿನ್ನೀರಿನ ಮೀನಿಗೆ ಬೇಡಿಕೆಯಿದೆ ಎನ್ನುತ್ತಾರೆ ಮಾರಾಟಗಾರರು.

ಭದ್ರಾ ಹಿನ್ನೀರಿನ ಮೀನುಗಳ ಜತೆಗೆ ಸಮುದ್ರದ ಮೀನುಗಳು ಸಹ ಮಾರುಕಟ್ಟೆಗೆ ಬರುತ್ತವೆ. ಬಂಗುಡೆ, ಬೈಗೆ, ಅಂಜಲ್ ಮೀನುಗಳು ಲಭ್ಯವಿದೆ. ಆದರೆ, ಪೂರೈಕೆ ಕಡಿಮೆಯಾಗಿದ್ದು, ಬೆಲೆ ಗಗನಕ್ಕೇರಿದೆ.

ಹಸಿ ಮೀನಿನ ಜತೆಗೆ ಒಣಮೀನನ್ನೂ ಇಲ್ಲಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಬಂಗುಡೆ, ಕಲ್ಲೂರು, ಕೊರ್ವ, ಸೂರಲು, ಬಾಳೆಮೀನು, ಸಿಗಡಿ, ಅಂಜಲ್, ಪಾಂಪ್ಲೇಟ್, ಕಾಣೆ ಮತ್ತಿತರ ಒಣಮೀನು ಸಹ ಮಾರಾಟ ಮಾಡಲಾಗುತ್ತದೆ. ಒಣ ಮೀನಿನ ಕೆಜಿಗೆ ₹160 ರಿಂದ ₹180ರವರೆಗೆ ಇದೆ.

ನರಸಿಂಹರಾಜದ ಮೀನು ಮಾರುಕಟ್ಟೆಗೆ ಗುರುವಾರ ಮಾರಾಟಕ್ಕೆ ಬಂದಿದ್ದ ಮೀನುಗಳು
ನರಸಿಂಹರಾಜದ ಮೀನು ಮಾರುಕಟ್ಟೆಗೆ ಗುರುವಾರ ಮಾರಾಟಕ್ಕೆ ಬಂದಿದ್ದ ಮೀನುಗಳು

- ‘ಬೇಡಿಕೆ ಕಡಿಮೆ’

ರಂಜಾನ್ ಮಾಸ ಗುಡ್ ಫ್ರೈಡೇ ಉಪವಾಸ ಜಾತ್ರೆ ಸಂದರ್ಭವಾಗಿರುವುದರಿಂದ ಸದ್ಯ ಒಣ ಮೀನಿಗೆ ಬೇಡಿಕೆ ಕಡಿಮೆಯಾಗಿದೆ ಎನ್ನುತ್ತಾರೆ ಒಣಮೀನು ವ್ಯಾಪಾರಿ ಆಸೀಫ್. ಭದ್ರಾ ಹಿನ್ನೀರಿನ ಮೀನಿಗೆ ಬೇಡಿಕೆ ಇದೆ. ಆದರೆ ಶಿಕಾರಿ ಕಡಿಮೆಯಾಗಿದೆ ಎಂದು ಮೀನು ವ್ಯಾಪಾರಿ ಫೈರೋಜ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT