ಚಿಕ್ಕಮಗಳೂರು: ಮತಗಳನ್ನು ಮರು ಎಣಿಕೆ ಮಾಡುವಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಎಣಿಕೆ ಕೇಂದ್ರ ಮುಂಭಾಗದ ರಸ್ತೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಬೇಲೂರು ರಸ್ತೆಯ ಎಸ್ಟಿಜೆ ಕಾಲೇಜಿನ ಮುಂದಿನ ಮಾರ್ಗದಲ್ಲಿ ಸೇರಿದ್ದ ಪ್ರತಿಭಟನಾಕಾರರು ಮರು ಎಣಿಕೆಗೆ ಒತ್ತಾಯಿಸಿದರು. ಎಣಿಕೆ ಕೇಂದ್ರದೊಳಕ್ಕೆ ನುಗ್ಗಲು ಯತ್ನಿಸಿದರು.
ಪೊಲೀಸರು ಕಾಲೇಜಿನ ಪ್ರವೇಶ ದ್ವಾರದ ಗೇಟನ್ನು ಮುಚ್ಚಿದ್ದರು. ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಪ್ರತಿಭಟನಕಾರರು ನುಗ್ಗದಂತೆ ತಡೆಯೊಡ್ಡಿದರು.
ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ಅವರು ಮುಖಂಡರೊಂದಿಗೆ ಮಾತನಾಡಿ ಸಮಾಧಾನಪಡಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿ ಕಾರ್ಯಕರ್ತರೂ ಘೋಷಣೆಗಳನ್ನು ಕೂಗಿದರು.
ಬೇಲೂರು ರಸ್ತೆಯಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಮುಖಂಡರು ಕಿಕ್ಕಿರಿದು ಜಮಾಯಿಸಿದ್ದರು. ಹಾವು – ಏಣಿ ಆಟದಲ್ಲಿ ಕೊನೆಗೂ ಬಿಜೆಪಿ ಅಭ್ಯರ್ಥಿಗೆ ಗೆಲುವು ಒಲಿದು ಬಂತು.
‘ಫಲಿತಾಂಶ ಘೋಷಣೆ– ತಡೆಗೆ ಮನವಿ’ ನಾಮನಿರ್ದೇಶನ ಸದಸ್ಯರ ಮತಗಳ ತಕರಾರು ವಿಚಾರ ಕೋರ್ಟ್ನಲ್ಲಿದೆ. ಹೀಗಾಗಿ, ಚುನಾವಣೆ ಫಲಿತಾಂಶ ತಡೆಹಿಡಿಯುವಂತೆ ಜಿಲ್ಲಾ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ ಎಂದು ವಕೀಲ ಪುಟ್ಟೇಗೌಡ ತಿಳಿಸಿದರು.
‘ಹುಯಿಗೆರೆ ಮತಗಟ್ಟೆಯಲ್ಲಿ ಮಾದರಿ ಮತಪತ್ರವನ್ನು ಹಾಕಿ, ಮೂಲಪತ್ರವನ್ನು ಒಯ್ಯಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದೇವೆ. ಮತಗಳ ಮರು ಎಣಿಕೆಗೆ ಜಿಲ್ಲಾ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ಕಾಂಗ್ರೆಸ್ ಮುಖಂಡ ಎ.ಎನ್.ಮಹೇಶ್ ತಿಳಿಸಿದರು.