ಚಿಕ್ಕಮಗಳೂರು: ಕೊರೊನಾ ವೈರಾಣು ಪತ್ತೆ ಪರೀಕ್ಷೆಗೆ ಮಾದರಿಗಳನ್ನು ಪ್ರಯೋಗಾಲಯಕ್ಕೆ ಒಯ್ಯುತ್ತಿದ್ದ ನೌಕರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸಹಿತ ಆರು ಮಂದಿಗೆ ಗುರುವಾರ ಕೋವಿಡ್ ದೃಢ ಪಟ್ಟಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 60ಕ್ಕೆ ಏರಿದೆ.
ಚಿಕ್ಕಮಗಳೂರು ತಾಲ್ಲೂಕಿನಲ್ಲಿ ನಾಲ್ವರು, ಶೃಂಗೇರಿ ತಾಲ್ಲೂಕಿನ ಒಬ್ಬರು ಮತ್ತು ತರೀಕೆರೆ ತಾಲ್ಲೂಕಿನ ಒಬ್ಬರು ಸೋಂಕು ಪತ್ತೆಯಾಗಿದೆ. ಆರು ಮಂದಿ ಪೈಕಿ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರು. ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್ ತಿಳಿಸಿದ್ದಾರೆ.
ಈವರೆಗಿನ ಒಟ್ಟು ಪ್ರಕರಣಗಳು ಸಂಖ್ಯೆ 129ಕ್ಕೆ ತಲುಪಿದೆ.
ನಿಯಂತ್ರಿತ ವಲಯ (ಕಂಟೈನ್ಮೆಂಟ್) : ನಗರದ ರಾಂಪುರದ ಚಿಂತಾಮಣಿ ದೇವಸ್ಥಾನದ ಬಳಿ, ಕಲ್ಯಾಣ ನಗರದ ವಾಟರ್ ಟ್ಯಾಂಕ್ ಬಳಿ, ಪೈ ಕಾಂಪೌಂಡ್ನ ಜನತಾ ಸ್ಟೋರ್ ಪ್ರದೇಶಗಳನ್ನು ನಿಯಂತ್ರಿತ ವಲಯವನ್ನಾಗಿ ಘೋಷಿಸಲಾಗಿದೆ.