ಉಜಿರೆ: ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ನೆಲೆಯಲ್ಲಿ ಬೇಧ - ಭಾವ ಮರೆತು ಸಮಾನತೆ, ಸಾಮರಸ್ಯ ಮತ್ತು ಸಹಬಾಳ್ವೆಯ ನೆಲೆಯಲ್ಲಿ ಧರ್ಮಸ್ಥಳದ ಎಲ್ಲ ಸೇವಾ ಕಾರ್ಯಗಳನ್ನು ಮಾಡಲಾಗುತ್ತದೆ. ದೇವಸ್ಥಾನದಲ್ಲಿ ಹಾಗೂ ಅನ್ನದಾನ, ವಿದ್ಯಾದಾನ, ಔಷಧಿ ದಾನ ಮತ್ತು ಅಭಯ ದಾನ ಹಾಗೂ ಎಲ್ಲ ಸೇವಾ ಕಾರ್ಯಗಳನ್ನು ಮಾಡುವಾಗ ಜಾತಿ-ಮತ-ಬೇಧವಿಲ್ಲದೆ ಎಲ್ಲ ಭಕ್ತರನ್ನು ಸಮಾನವಾಗಿ ಗೌರವಿಸಲಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಉಜಿರೆಯಿಂದ ಧರ್ಮಸ್ಥಳಕ್ಕೆ 25 ಸಾವಿರಕ್ಕೂ ಹೆಚ್ಚು ಭಕ್ತರು ಹಾಗೂ ಸಾರ್ವಜನಿಕರು ಶಿವ ಪಂಚಾಕ್ಷರಿ ಪಠಣ ಮತ್ತು ಭಜನೆಗಳನ್ನು ಮಾಡುತ್ತಾ ಪಾದಯಾತ್ರೆಯಲ್ಲಿ ಬಂದು, ಅಮೃತವರ್ಷಿಣಿ ಸಭಾಭವನದಲ್ಲಿ ಹಮ್ಮಿಕೊಂಡ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯ ಸಭಾ ಸದಸ್ಯರಾಗಿ ನಾಮನಿರ್ದೇಶನ, ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಹಾಗೂ ಬಹುಮುಖಿ ಸಮಾಜ ಸೇವೆಯನ್ನು ಗೌರವಿಸಿ ಅಭಿನಂದಿಸಲಾಯಿತು.
ಉದ್ದೇಶ ಸ್ಷಷ್ಟವಾಗಿದ್ದಾಗ ಎಲ್ಲ ಜನಪರ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಪ್ರಧಾನಿಯವರು ತನ್ನನ್ನು ರಾಜ್ಯಸಭಾ ಸದಸ್ಯನಾಗಿ ನಾಮನಿರ್ದೇಶನ ಮಾಡಿದ್ದಾರೆ. ರಾಷ್ಟಮಟ್ಟದಲ್ಲಿ ಸೇವೆ ಮಾಡಲು ದೊರತೆ ಅವಕಾಶ ಎಂದು ಸ್ವೀಕರಿಸಿದ್ದೇನೆ. ಇದು ನನಗೆ ಹಾಗೂ ಧರ್ಮಸ್ಥಳಕ್ಕೆ ಸಂದ ಗೌರವ ಎಂದರು.
ಭೇದ ಭಾವ ಮರೆತು ಎಲ್ಲರೂ ಪ್ರೀತಿ-ವಿಶ್ವಾಸದಿಂದ, ಸಮಾನತೆ ಮತ್ತು ಸಾಮರಸ್ಯದ ಜೀವನ ನಡೆಸಿ ಎಂದು ಅವರು ಸಲಹೆ ನೀಡಿದರು.
ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಮಾತನಾಡಿ ಶ್ರದ್ಧಾ-ಭಕ್ತಿಯಿಂದ ಮಾಡಿದ ಪಾದಯಾತ್ರೆಯಲ್ಲಿ ಆಯಾಸ ಮತ್ತು ಸಮಯ ತಿಳಿಯಲೇ ಇಲ್ಲ. ಎಲ್ಲರಲ್ಲಿಯೂ ಉತ್ಸಾಹ, ಸಂತೋಷ ಮತ್ತು ನೆಮ್ಮದಿ ಮೂಡಿಬಂದಿದೆ ಎಂದರು.
ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಕಲಿಯುಗದಲ್ಲಿ ಸಾತ್ವಿಕ ಶಕ್ತಿಯ ಸಂಘಟನೆಯೇ ಬಲವಾಗಿದೆ ಎಂದರು.
ಹೇಮಾವತಿ ಹೆಗ್ಗಡೆ, ಉಜಿರೆಯ ಶರತ್ಕೃಷ್ಣ ಪಡ್ವೆಟ್ನಾಯ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಮಾನ್ಯ, ಸೋನಿಯಾ ವರ್ಮ ಮತ್ತು ಪೂರಣ್ ವರ್ಮ ಇದ್ದರು.
ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಸಿ.ಒ.ಒ. ಅನಿಲ್ ಕುಮಾರ್ ಧನ್ಯವಾದ
ವಿತ್ತರು. ಶ್ರೀನಿವಾಸ್ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.
ಉಜಿರೆಯಲ್ಲಿ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಶರತ್ಕೃಷ್ಣ ಪಡ್ವೆಟ್ನಾಯ ಹಾಗೂ ಶಾಸಕ ಹರೀಶ್ ಪೂಂಜ ಪಾದಾಯಾತ್ರೆಗೆ ಚಾಲನೆ ನೀಡಿದರು. ಧರ್ಮಸ್ಥಳದಲ್ಲಿ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.