ಜಯಪುರ (ಬಾಳೆಹೊನ್ನೂರು): ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆ– ಗಾಳಿಯಿಂದ ಮೇಗುಂದಾ ಹೋಬಳಿಯಲ್ಲಿ 140 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಗಿದೆ.
ರಾತ್ರಿ ಮಳೆಯೊಂದಿಗೆ ಗಾಳಿಯ ವೇಗವೂ ಹೆಚ್ಚಿದ್ದು, ದುರ್ಗಮ ಪ್ರದೇಶಗಳಾದ ಕೊಗ್ರೆ, ಮೆಣಸಿನಹಾಡ್ಯ, ಬಸರೀಕಟ್ಟೆ ಸೇರಿದಂತೆ ಹೋಬಳಿಯ ವಿವಿಧ ಕಡೆಗಳಲ್ಲಿ ಅಪಾರ ಹಾನಿ ಉಂಟಾಗಿದೆ. ಈ ಭಾಗದ ಮೆಸ್ಕಾಂ ಸಿಬ್ಬಂದಿ ಹಗಲು– ರಾತ್ರಿ ಕೆಲಸ ನಿರ್ವಹಿಸುತ್ತಿದ್ದಾರೆ.
‘ಗ್ರಾಮೀಣ ಪ್ರದೇಶಗಳಲ್ಲಿ ಹಾನಿ ಪ್ರಮಾಣ ಜಾಸ್ತಿಯಾಗಿದ್ದು, ಸಿಬ್ಬಂದಿ ಮಳೆಯನ್ನೂ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ 400 ವಿದ್ಯುತ್ ಪರಿವರ್ತಕಗಳಿಗೆ ಸಂಪರ್ಕ ದೊರೆತಿದ್ದು, ಇನ್ನೂ 20 ಟಿ.ಸಿಗಳ ಸಂಪರ್ಕ ಸಾಧಿಸಬೇಕಿದೆ. 3 ವಿದ್ಯುತ್ ಪರಿವರ್ತಕಗಳು ಸಂಪೂರ್ಣ ಹಾನಿಯಾಗಿದೆ ಎಂದು ಮೆಸ್ಕಾಂ ಜೆಇ ಪ್ರಶಾಂತ್ ತಿಳಿಸಿದರು.