ಬಾಳೆಹೊನ್ನೂರು: ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆಯ ಸವಿನೆನಪಿಗಾಗಿ, ಇಲ್ಲಿನ ಕಾಮಧೇನು ಗೋ ಸೇವಾ ಟ್ರಸ್ಟ್ ವತಿಯಿಂದ ನೂತನ ಗೋಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ’ ಎಂದು ಟ್ರಸ್ಟ್ ಮುಖ್ಯಸ್ಥ ನಾಗೇಶ್ ಆಂಗೀರಸ ಹೇಳಿದರು.
ದೇವಗೋಡು ಗ್ರಾಮದ ಕೆಮ್ಮಣ್ಣು-ನೀರ್ಕಟ್ಟುವಿನಲ್ಲಿ ಗೋ ಶಾಲೆಯ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಭಾರತದ ಇನ್ನೊಂದು ಮುಖ ಗೋವು. ಗೋವು ಇಲ್ಲದ ಭಾರತವನ್ನು ಊಹಿಸಲು ಸಾಧ್ಯವಿಲ್ಲ.ದೇಸಿ ಗೋವುಗಳನ್ನು ಮತ್ತು ಹಿಂದೂ ಧರ್ಮದ ತಳ ಸಮುದಾಯ, ನಿರ್ಲಕ್ಷಿತ ಸಮುದಾಯಗಳನ್ನು ಗುರುತಿಸುವ ಕೆಲಸವಾಗಬೇಕಿದೆ’ ಎಂದರು.
ಹಿಂದುಳಿದ, ತಳ ಸಮುದಾಯಗಳ ಮುಖಂಡರಾದ ಅಪ್ಪಿ ಪೂಜಾರ್ತಿ, ಕಿಟ್ಟಿನಾಯ್ಕ, ಗೋಪಾಲಯ್ಯ ಶಂಕರಕೊಡಿಗೆ, ದೇವಪ್ಪ ಆಚಾರ್, ಗೋಪಾಲಯ್ಯ ಮುಜೇಖಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.