ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ದುರಸ್ತಿಗೆ ಕಾದಿವೆ 107 ಶಾಲಾ ಕಟ್ಟಡ

Published 4 ಡಿಸೆಂಬರ್ 2023, 6:06 IST
Last Updated 4 ಡಿಸೆಂಬರ್ 2023, 6:06 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಅಲ್ಲಲಿ ಶಿಥಿಲಾವಸ್ತೆಯಲ್ಲಿದ್ದು, ಭಯದ ನಡುವೆ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದಾರೆ. ಈ ನಡುವೆ 107 ಶಾಲಾ ಕಟ್ಟಡಗಳು ದುರಸ್ತಿಗೆ ಕಾದಿವೆ.

ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದರೆ, ಇತ್ತ ಶಾಲೆಗಳಲ್ಲಿ ಕಟ್ಟಡ ಕೂಡ ಹಾಳಾಗುತ್ತಿವೆ. ಚಿಕ್ಕಮಗಳೂರು ನಗರದ ಮಧ್ಯದಲ್ಲಿರುವ ಪೋರ್ಟರ್ ಪೇಟೆ ಸರ್ಕಾರಿ ಶಾಲೆಯಲ್ಲಿ 45 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಈ ಶಾಲೆಯ ಮೇಲ್ಚಾವಣಿ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಕಳಚಿ ಬೀಳುವ ಹಂತದಲ್ಲಿದೆ. ಮೇಲ್ಚಾವಣಿ ಮತ್ತು ಗೋಡೆ ಮುಟ್ಟಿದರೆ ಸಿಮೆಂಟ್ ಉದುರಿ ಬೀಳುತ್ತಿದ್ದು, ಮಳೆ ಬಂದರೆ ಇನ್ನಷ್ಟು ಹಾಳಾಗುವ ಆತಂಕ ಇದೆ.

2003ರಲ್ಲಿ ನಿರ್ಮಾಣವಾಗಿರುವ ಕಟ್ಟಡ ದುರಸ್ತಿ ಕಂಡಿಲ್ಲ. ಇದರ ನಡುವೆಯೇ ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದಾರೆ. ಇದು ಸರ್ಕಾರಿ ಶಾಲೆಯ ದುಸ್ತಿಗೆ ಉದಾಹರಣೆ. ಈ ರೀತಿಯ ಅನೇಕ ಶಾಲೆಗಲಿದ್ದು, ದುರಸ್ತಿ ಆಗಬೇಕಿದೆ.

ದುರಸ್ತಿಗೆ ಕಾದಿರುವ 1,148 ಶಾಲೆಗಳ ಪಟ್ಟಿಯನ್ನು ನಾಲ್ಕು ವರ್ಷಗಳ ಹಿಂದೆ ಸಿದ್ಧಪಡಿಸಿದ್ದು, ಇವುಗಳ ಪೈಕಿ 971 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, 70 ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ, 107 ಕಾಮಗಾರಿಗಳು ಇನ್ನೂ ಆರಂಭವೇ ಆಗಿಲ್ಲ. ಇವುಗಳ ಜತೆಗೆ ಇನ್ನೂ ಹಲವು ಕಟ್ಟಡಗಳು ಈಗ ಈ ಪಟ್ಟಿಗೆ ಸೇರುವ ಸ್ಥಿತಿಯಲ್ಲಿವೆ. ಕಾಮಗಾರಿ ಕೈಗೆತ್ತಿಕೊಳ್ಳಲು ಪ್ರಸಕ್ತ ಸಾಲಿನಲ್ಲಿ ಅನುದಾನ ನಿಗದಿಯಾಗಿಲ್ಲ. ಆದ್ದರಿಂದ ಸದ್ಯಕ್ಕೆ ಬೇರೆ ಕಟ್ಟಡಗಳ ದುರಸ್ತಿ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.

ಆರಂಭವೇ ಆಗದ ಕಾಮಗಾರಿ

ಕೊಪ್ಪ: ಕಳೆದ ಬಾರಿ ಮಂಜೂರಾಗಿ ಗುದ್ದಲಿ ಪೂಜೆಯನ್ನೂ ನೆರವೇರಿಸಿದ್ದ ವಿವೇಕ ಶಾಲೆ ಕಾಮಗಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇನ್ನೂ ಆರಂಭವಾಗಿಲ್ಲ. ತಾಲ್ಲೂಕಿನ ಹಿರೇಕೊಡಿಗೆ ಪಂಚಾಯಿತಿ ವ್ಯಾಪ್ತಿ ಕಗ್ಗಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಿಲುವಾಗಿಲು ಮಹಾಂತರಮಠ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದಾಖಲಾತಿ ಕೊರತೆಯಿಂದ ಈ ಬಾರಿ ಮುಚ್ಚಲ್ಪಟ್ಟಿದೆ. ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಕವನಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಗಳಗಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ದುರಸ್ತಿಯಾಗಬೇಕಿದೆ. ಚಾವಲ್ಮನೆ ಪಂಚಾಯಿತಿ ವ್ಯಾಪ್ತಿ ಕಮ್ಮರಡಿ ಸರ್ಕಾರಿ ಫ್ರೌಢಶಾಲೆ ಹೇರೂರು ಪಂಚಾಯಿತಿ ವ್ಯಾಪ್ತಿ ಶಾಂತಿಗ್ರಾಮ ಸರ್ಕಾರಿ ಫ್ರೌಢಶಾಲೆ ಕಟ್ಟಡ ದುರಸ್ತಿಯಾಗಬೇಕಿದೆ. ‘ಶೇ 75 ರಷ್ಟು ಶಾಲೆಗಳು ದುರಸ್ತಿ ಆಗಬೇಕಿದೆ. ಪ್ರತಿ ಶಾಲೆಗೆ ₹2 ಲಕ್ಷ ಮಂಜೂರಾಗಿದೆ. ವಿವೇಕ ಶಾಲೆ ಕಟ್ಟಡಕ್ಕೆ ಜಾಗದ ಕೊರತೆಯಿಂದ ಆರಂಭಿಸಿಲ್ಲ. ಹಳೆಯ ಕೊಠಡಿ ಜಾಗದಲ್ಲಿ ನಿರ್ಮಿಸಲಾಗುತ್ತದೆ’ ಎಂದು ಕೊಪ್ಪ ಬಿಇಒ ಜ್ಯೋತಿ ತಿಳಿಸಿದರು.

12 ಶಾಲೆ ದುರಸ್ತಿಗೆ ಕ್ರಿಯಾ ಯೋಜನೆ

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ 2022–23ನೇ ಸಾಲಿನಲ್ಲಿ 5 ಶಾಲೆಗಳ 6 ಕೊಠಡಿ ದುರಸ್ತಿಗೆ ಅನುದಾನ ಮಂಜೂರಾಗಿದ್ದು ಬಹುತೇಕ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿವೆ. ‘2023–24ನೇ ಸಾಲಿನಲ್ಲಿ 12 ಶಾಲೆಗಳ ದುರಸ್ತಿಗೆ ಕ್ರಿಯಾಯೋಜನೆ ರೂಪಿಸಿ ಶಾಸಕರಿಗೆ ಸಲ್ಲಿಸಲಾಗಿದೆ. ಆದರೆ ಅನುದಾನ ಬಿಡುಗಡೆ ಯಾಗಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ತಿಳಿಸಿದರು.

ಅನುಮತಿಗೆ ಕಾದಿರುವ ಅಧಿಕಾರಿಗಳು

ಶೃಂಗೇರಿ: ತಾಲ್ಲೂಕಿನಲ್ಲಿ ಕಳೆದ 2 ವರ್ಷದಿಂದ 22 ಸರ್ಕಾರಿ ಶಾಲೆ ಕಟ್ಟಡಗಳ ದುರಸ್ಥಿ ಕಾಮಗಾರಿಗೆ ಅನುಮತಿ ಸಿಕ್ಕಿಲ್ಲ. ವೈಕುಂಠಪುರ ಪ್ರಾಥಮಿಕ ಶಾಲೆ ತೆಕ್ಕೂರು ಪ್ರಾಥಮಿಕ ಶಾಲೆ ಕೆಳಕೊಪ್ಪ ಪ್ರಾಥಮಿಕ ಶಾಲೆ ಧರೆಕೊಪ್ಪ ಪ್ರಾಥಮಿಕ ಶಾಲೆ ಕಾಂಚಿನಗರ ಪ್ರಾಥಮಿಕ ಶಾಲೆ ಆನೆಗುಂದ ಪ್ರಾಥಮಿಕ ಬೇಗಾರ್ ಪ್ರಾಥಮಿಕ ಮತ್ತು ಪ್ರೌಢಶಾಲೆ ಹೊಳೆಕೊಪ್ಪ ಪ್ರೌಢಶಾಲೆ ನಲ್ಲೂರು ಹೊನ್ನಹೊಳ್ಳಿ ತನಿಕೋಡು ಕಲ್ಕಟ್ಟೆ ಕೋಗಿನಬೈಲು ಕುಂಚೇಬೈಲು ಯಡದಾಳು ದುರ್ಗಾದೇವಾಸ್ಥನ ಗಂಡಗಟ್ಟ ಕಿಗ್ಗಾ ತ್ಯಾವಣ ಪ್ರಾಥಮಿಕ ಶಾಲೆಗಳಲ್ಲಿ ದುರಸ್ತಿ ಕಾಮಗಾರಿಗಳು ನಡೆಯಬೇಕಿದೆ. ಎಲ್ಲಾ ಶಾಲೆಗಳಲ್ಲಿ ಮೇಲ್ಛಾವಣಿ ಗೋಡೆ ದುರಸ್ತಿ ಮತ್ತು ನೆಲಹಾಸು ದುರಸ್ತಿಗಳು ಅತ್ಯಂತ ಶೀಘ್ರ ಆಗಬೇಕು. ಆಗದಿದ್ದರೆ ವಿದ್ಯಾರ್ಥಿಗಳು ಪರದಾಡಬೇಕಾಗುತ್ತದೆ. ಪಟ್ಟಣದ ಮಲ್ಲಿಕಾರ್ಜುನ ಬೀದಿ ಸರ್ಕಾರಿ ಬಾಲಕಿಯರ ಶಾಲೆಯ ಎರಡು ಕೊಠಡಿಗಳು ದುರಸ್ತಿ ಮಾಡಲು ಸಾಧ್ಯವಾಗದೆ ಸಂಪೂರ್ಣ ಹಾಳಾಗಿವೆ. 29 ಶಾಲೆಗಳು ದಾಖಲಾತಿಯಿಲ್ಲದೆ ಶಾಲೆಗಳ ಕಟ್ಟಡ ಬಳಕೆಗೆ ಬಾರದೆ ಮುಚ್ಚಿ ಹೋಗಿವೆ. 22 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕಟ್ಟಡದ ದುರಸ್ಥಿಗೆ ಸುಮಾರು 42 ಲಕ್ಷದ ಕ್ರೀಯಯೋಜನೆ ಸಿದ್ದಪಡಿಸಿ ಜಿಲ್ಲಾ ಪಂಚಾಯಿತಿಗೆ ಅನುಮೋದನೆಗೆ ಕಳುಹಿಸಲಾಗಿದೆ. ಅನುಮತಿ ಸಿಕ್ಕಿದ ನಂತರ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜಿ. ರಾಘವೇಂದ್ರ ಹೇಳಿದರು.

ಶಿಥಿಲವಾದ ಕಟ್ಟಡದಲ್ಲಿ ಬೋಧನೆ

ತರೀಕೆರೆ: ತಾಲ್ಲೂಕಿನ ಲಕ್ಷ್ಮಿಸಾಗರ ಗೋಪಾಲ ಬೂಸೆನಹಳ್ಳಿ ಕೆಂಚಿಕೊಪ್ಪ ಎಂ.ಸಿ.ಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಬೋಧನೆಗೆ ಕೊಠಡಿಗಳ ಅಭಾವ ಕಳೆದ ನಾಲ್ಕು ವರ್ಷಗಳಿಂದ ಇದೆ. ಕೊಠಡಿ ಅಭಾವದಿಂದ ತರಗತಿಗಳನ್ನು ಒಂದುಗೂಡಿಸಿ ಬೋಧನೆ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗಿದೆ. ಶಾಲಾ ಕಟ್ಟಡ ದುರಸ್ತಿ ಮಾಡುವಂತೆ ಕಳೆದ ನಾಲ್ಕು ವರ್ಷದಿಂದ ಮನವಿ ಮಾಡಿದರು ಶಿಕ್ಷಣ ಇಲಾಖೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಿಸಿದವರು ಕೊಡಲೆ ಗಮನಹರಿಸಿ ಕೊಠಡಿ ದುರಸ್ತಿ ಮಾಡಬೇಕು ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಸದಸ್ಯ ಲಕ್ಷ್ಮಿಸಾಗರದ ಶಿವಕುಮಾರ್.

ಹಿರೇಬೈಲಿನಲ್ಲಿ ಆರಂಭವಾಗದ ಕಾಮಗಾರಿ

ಕಳಸ: ಹಿರೇಬೈಲು ಸರ್ಕಾರಿ ಪ್ರಾಥಮಿಕ ಶಾಲೆಯ 90 ವರ್ಷ ಹಳೆಯ ಕಟ್ಟಡ ಶಿಥಿಲವಾಗಿದೆ. ಕಟ್ಟಡ ಕುಸಿಯುವ ಹಂತದಲ್ಲಿ ಇದ್ದರೂ ಈವರೆಗೂ ಶಾಲಾ ಕಟ್ಟಡದ ನಿರ್ಮಾಣ ಆರಂಭವಾಗಿಲ್ಲ. ಕಟ್ಟಡ ಬೀಳುವ ಸ್ಥಿತಿಯಲ್ಲಿದೆ ಎಂಬ ಕಳೆದ ಜೂನ್ ತಿಂಗಳ ‘ಪ್ರಜಾವಾಣಿ’ ವರದಿ ಪ್ರಕಟಿಸಿದ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಎಂಜಿನಿಯರ್ ಶಾಲೆಗೆ ಭೇಟಿ ನೀಡಿದ್ದರು. ಇಲಾಖೆಗೆ ಅವರು ನೀಡಿದ ವರದಿ ಆಧರಿಸಿ 2 ಕೊಠಡಿಗಳ ನಿರ್ಮಾಣಕ್ಕೆ ₹26 ಲಕ್ಷ ಮೊತ್ತದ ಯೋಜನೆ ರೂಪಿಸಲಾಗಿದೆ. ಆದರೆ ಕಾಮಗಾರಿ ಈವರೆಗೆ ಆರಂಭವಾಗಿಲ್ಲ. ಒಂದರಿಂದ 7ನೇ ತರಗತಿವರೆಗೆ 80 ಮಕ್ಕಳುಈಗಲೂ ಶಿಥಿಲಗೊಂಡ ಶಾಲಾ ಕಟ್ಟಡದಲ್ಲೇ ಪಾಠ ಕೇಳುವಂತಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಹಳೆ ಕಟ್ಟಡಗಳ ದುರಸ್ತಿಗೆ‌ ಕ್ರಮವಾಗಲಿ

ಮೂಡಿಗೆರೆ: ತಾಲ್ಲೂಕಿನಲ್ಲಿರುವ ಹಲವು ಶಾಲೆಗಳ ಹಳೆ ಕಟ್ಟಡಗಳನ್ನು ದುರಸ್ತಿ ಮಾಡಬೇಕಿದೆ.ತಾಲ್ಲೂಕಿನಲ್ಲಿ ಬಹುತೇಕ ಶಾಲೆಗಳಲ್ಲಿ ಉತ್ತಮವಾದ ಕೊಠಡಿಗಳಿದ್ದರೂ ಹಳೆ ಕಟ್ಟಡಗಳ ಹಳೇ ಕಟ್ಟಡಗಳ ಚಿತ್ರಣ ಮಾತ್ರ ಬದಲಾಗಿಲ್ಲ. ತಾಲ್ಲೂಕಿನ ಹೆಸ್ಗಲ್ ಹಳಿಕೆ ತಳವಾರ ದೇವರುಂದ ಸೇರಿದಂತೆ ಹಲವು ಗ್ರಾಮಗಳ್ಲಿರುವ ಸರ್ಕಾರಿ ಶಾಲೆಗಳ ಕೊಠಡಿಗಳು ಮೂರು ದಶಕಕ್ಕೂ ಹಿಂದೆ ನಿರ್ಮಿಸಿದವುಗಳಾಗಿದ್ದು ನೆಲ ಗುಂಡಿ ಬಿದ್ದಿರುವುದು ಮೇಲ್ಛಾವಣಿ ಕುಸಿಯುವ ಹಂತಕ್ಕೆ ತಲುಪಿರುವ ಸ್ಥಿತಿಯಿದೆ. ಇಂತಹ ಶಾಲೆಗಳ ದುರಸ್ತಿಗೆ ಕ್ರಮ‌ಕೈಗೊಳ್ಳಬೇಕಿದೆ. ಹಳೇ ಕಟ್ಟಡಗಳಲ್ಲಿ ಹೆಂಚಿನ ಮೇಲ್ಛಾವಣಿಗಳಿದ್ದು ಮೂರು ದಶಕಗಳನ್ನು ಕಳೆದಿರುವ ಹೆಂಚುಗಳಲ್ಲಿ ದೂಳು ಉದುರುತ್ತಿದ್ದು ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಈ ಕೊಠಡಿಗಳಲ್ಲಿ ಮಳೆಗಾಲದಲ್ಲಿ ಮಣ್ಣು ಉದುರುವುದು ಸಾಮಾನ್ಯವಾಗಿದೆ. ಅಲ್ಲದೇ ತಾಲ್ಲೂಕಿನಲ್ಲಿ ಬಣ್ಣ‌ ಮಾಸಿರುವ ಶಾಲೆಗಳಿಗೆ ಸುಣ್ಣ‌ ಬಣ್ಣ ಬಳಿದು ಮಕ್ಕಳನ್ನು ಆಕರ್ಷಿಸುವಂತೆ ಮಾಡಬೇಕಿದೆ.

ಅಂಕಿ–ಅಂಶ

1148 ಕಾಮಗಾರಿಕಳೆದ ನಾಲ್ಕು ವರ್ಷಗಳಲ್ಲಿ ಮಂಜೂರಾದ ದುರಸ್ತಿ ಕಾಮಗಾರಿ ಸಂಖ್ಯೆ 971 ಕಾಮಗಾರಿಕೆಲಸ ಪೂರ್ಣಗೊಂಡಿರುವುದು 70 ಕಾಮಗಾರಿಪ್ರಗತಿಯಲ್ಲಿರುವುದು 107 ಕಾಮಗಾರಿಇನ್ನೂ ಆರಂಭವೇ ಆಗದಿರುವುದು

ಪೂರಕ ಮಾಹಿತಿ: ರವಿಕುಮಾರ್ ಶೆಟ್ಟಿಹಡ್ಲು, ಕೆ.ವಿ.ನಾಗರಾಜ್, ಕೆ.ಎನ್.ರಾಘವೇಂದ್ರ, ಎಚ್‌.ಎಂ.ರಾಜಶೇಖರಯ್ಯ, ರವಿ ಕೆಳಂಗಡಿ.

ತರೀಕೆರೆ ತಾಲ್ಲೂಕಿನ ಲಕ್ಷ್ಮಿಸಾಗರದ ಶಾಲೆಯ ಮೇಲ್ಚಾವಣಿ ಕುಸಿದಿರುವುದು
ತರೀಕೆರೆ ತಾಲ್ಲೂಕಿನ ಲಕ್ಷ್ಮಿಸಾಗರದ ಶಾಲೆಯ ಮೇಲ್ಚಾವಣಿ ಕುಸಿದಿರುವುದು
ಚಿಕ್ಕಮಗಳೂರು ನಗರದ ಪೋರ್ಟರ್ ಪೇಟೆಯ ಶಾಲೆಯ ಸ್ಥಿತಿ
ಚಿಕ್ಕಮಗಳೂರು ನಗರದ ಪೋರ್ಟರ್ ಪೇಟೆಯ ಶಾಲೆಯ ಸ್ಥಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT