ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಹಳ್ಳಿಗಾಡಿನಲ್ಲಿ ಕನ್ನಡ ಶಾಲೆಯ ಕಲರವ

ನಿಡಘಟ್ಟ ಎ.ಕೆ. ಕಾಲೊನಿ ಕಿರಿಯ ಪ್ರಾಥಮಿಕ ಶಾಲೆಯ ಯಶೋಗಾಥೆ
Last Updated 21 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬೀರೂರು: ಸರ್ಕಾರಿ ಶಾಲೆ ಎಂದರೆ ಎಲ್ಲರೂ ಮೂಗು ಮುರಿಯುವ ಸಂದ ರ್ಭದಲ್ಲಿ ಇಲ್ಲಿನ ಗ್ರಾಮೀಣ ಪ್ರದೇಶದ ಕಿರಿಯ ಪ್ರಾಥಮಿಕ ಶಾಲೆಯೊಂದು ಹತ್ತಾರು ಕನಸುಗಳನ್ನು ಹೊತ್ತು ಮಕ್ಕಳ ಅಭ್ಯುದಯಕ್ಕಾಗಿ ಶ್ರಮಿಸುತ್ತಿದೆ.

ಇದು ಬೀರೂರು ಶೈಕ್ಷಣಿಕ ವಲಯ ನಿಡಘಟ್ಟದಲ್ಲಿರುವ ಎ.ಕೆ.ಕಾಲೊನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಥೆ. ತನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಆಸಕ್ತಿಯ ಫಲವಾಗಿ ಮತ್ತೆ ಹಳ್ಳಿಗಾಡಿನಲ್ಲಿ ವಿದ್ಯಾರ್ಥಿಗಳಿಂದ ತುಂಬಿದ ಕನ್ನಡ ಶಾಲೆಯ ಕಲರವವನ್ನು ಮತ್ತಷ್ಟು ಇಂಪಾಗಿಸಲು ಯತ್ನಿಸುತ್ತಿದೆ. ಪರಿಣಾಮವಾಗಿ ಇಂದು ಒಂದರಿಂದ ಐದನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳ ಸಂಖ್ಯೆ 90ಕ್ಕೆ ಏರಿಕೆಯಾಗಿದೆ.

ಶಾಲೆಯಲ್ಲಿ 4 ಶಿಕ್ಷಕರು ಇದ್ದಾರೆ. ಕಚೇರಿ ನಡೆಸಲು ಅಗತ್ಯ ಇರುವ ಕೊಠಡಿಯೂ ಸೇರಿ ನಾಲ್ಕು ಕೋಣೆಗಳು, ಕೈತೋಟ, ಮಕ್ಕಳಿಗಾಗಿ ಶೌಚಾಲಯ, ನೀರಿನ ವ್ಯವಸ್ಥೆ, ದಾನಿಗಳು ನೀಡಿದ ನೀರಿನ ಟ್ಯಾಂಕ್ ಹೀಗೆ ಹಲವು ಸೌಲಭ್ಯಗಳಿದ್ದರೂ ಏರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕೊಠಡಿ ಅವಶ್ಯಕತೆ ಇದೆ.

ಕೆಲವು ಸಂದರ್ಭಗಳಲ್ಲಿ ಶಾಲೆಯ ಎದುರೇ ಇರುವ ಕನಕಭವನದಲ್ಲಿ ಪಾಠ ಗಳು ನಡೆಯುತ್ತಿವೆ. ಶಿಕ್ಷಕರ ಶ್ರಮದ ಫಲವಾಗಿ ಇಲ್ಲಿನ ಮಕ್ಕಳಿಗೆ ಜೂನ್‌ನಿಂದಲೇ ಆನ್‍ಲೈನ್ ಶಿಕ್ಷಣ ಆರಂಭವಾಗಿದೆ. ಆಂಡ್ರಾಯ್ಡ್ ಫೋನ್ ಇರುವ ಪೋಷಕರ ಮನವೊಲಿಸಿ ಅವರಿಗೂ ತೊಂದರೆ ಆಗದಂತೆ ರಾತ್ರಿ 7.30ರಿಂದ 9ರ ವರೆಗೆ ಆವರ್ತನೆ ಮೇರೆಗೆ ಶಿಕ್ಷಕರು ತರಗತಿ ನಡೆಸಿದ್ದಾರೆ. ಫೋನ್ ಇಲ್ಲದವರು ಪಕ್ಕದ ಮನೆಗೆ ಅಥವಾ ಸಹೃದಯಿಗಳ ಸಹಕಾರ ದೊಂದಿಗೆ ಪಾಠ ವೀಕ್ಷಿಸಲು ಅನುವಾಗು ವಂತೆ ವ್ಯವಸ್ಥೆ ಮಾಡಲಾಗಿದೆ.

ವಿಶೇಷವೆಂದರೆ ಶಾಲೆಯಲ್ಲಿ ಪ್ರತಿ ಯೊಬ್ಬ ಮಗುವಿನ ಜನ್ಮದಿನ ಆಚರಣೆ ಒಂದು ಕರಾರಿನ ಮೇಲೆ ನಡೆದಿದೆ. ಅದೆಂದರೆ ‘ಮಕ್ಕಳಿಗೆ ಚಾಕೊ ಲೇಟ್- ಗ್ರಂಥಾಲಯ ಕ್ಕೆ ಒಂದು ಪುಸ್ತಕ’ ಹೀಗೆ ಎಳವೆಯಲ್ಲಿ ಯೇ ಪುಸ್ತಕಗಳಲ್ಲಿ ಆಸಕ್ತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಜತೆಗೆ ಮಕ್ಕಳಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ಲ್ಯಾಬೊರೇಟರಿ ಸ್ಥಾಪಿಸುವ ಯತ್ನವೂ ನಡೆದಿದೆ. ‌

ಲಾಕ್‍ಡೌನ್ ಸಂದರ್ಭದಲ್ಲಿ ಪರಸ್ಥಳದಿಂದ ಊರಿಗೆ ಬಂದ ಹತ್ತಾರು ಪೋಷಕರು ತಮ್ಮ ಮಕ್ಕಳನ್ನು ಇದೇ ಶಾಲೆಗೆ ಸೇರಿಸಲು ಆಸಕ್ತಿ ತೋರಿದ್ದಾರೆ. ಹಲವರು ಖಾಸಗಿ ಶಾಲೆಗಳು, ಕಾನ್ವೆಂಟ್ ಬಿಡಿಸಿ ತಮ್ಮ ಮಕ್ಕಳನ್ನು ಸೇರಿಸಿದ್ದಾರೆ. ನಿರ್ಬಂಧ ಸಡಿಲಿಕೆ ನಂತರ ಕಳೆದ ಆಗಸ್ಟ್ ತಿಂಗಳಿಂದ ಆಫ್‍ಲೈನ್ ತರಗತಿ ಆರಂಭವಾಗಿವೆ. ಮೂವರು ಶಿಕ್ಷಕರು ಸಮುದಾಯ ಭವನಗಳಲ್ಲಿ ಮಕ್ಕಳಿಗೆ ಪಾಠ ಹೇಳಿದರೆ,
ಇನ್ನೊಬ್ಬರು ಮನೆ ಬಾಗಿಲಿಗೆ ತೆರಳಿ ಪಾಠ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳೂ ಆಸಕ್ತಿಯಿಂದಲೇ ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ.

‘ಶಾಲೆಯನ್ನು ರಾಜ್ಯದಲ್ಲಿಯೇ ಮಾದರಿಯಾಗಿ ರೂಪಿಸುವುದು ನಮ್ಮ ಗುರಿ. ಹೀಗಾಗಿ ಇಲ್ಲಿ ಗ್ರಂಥಾಲಯ, ಲ್ಯಾಬೊರೇಟರಿ ಯಂತಹ ಅಗತ್ಯಗಳ ಸ್ಥಾಪನೆಗೆ ಒತ್ತು ನೀಡುತ್ತಿದ್ದೇವೆ. ಇಲಾಖೆ ಅಧಿಕಾರಿಗಳ ಮಾರ್ಗದರ್ಶನ, ಗ್ರಾಮಸ್ಥರ ಸಹಕಾರ ಚೆನ್ನಾಗಿದೆ. ಆದರೆ ಉದಾರ ದಾನಿಗಳ ನೆರವು ನಮಗೆ ಮತ್ತಷ್ಟು ಕನಸು ಕಾಣಲು ನೆರವಾಗುವುದು. ಕನ್ನಡ ಶಾಲೆಗಳು ಯಾವುದರಲ್ಲಿಯೂ ಕಡಿಮೆ ಇಲ್ಲ ಎಂದು ನಿರೂಪಿಸಿ ಮತ್ತೆ ಸರ್ಕಾರಿ ಶಾಲೆಗಳ ಹಿರಿಮೆ ಹೆಚ್ಚಿಸುವುದು ನಮ್ಮ ಧ್ಯೇಯ’ ಎನ್ನುತ್ತಾರೆ ಶಿಕ್ಷಕ ಆರ್.ಟಿ.ಅಶೋಕ. ಇವರಿಗೆ ದನಿ ಗೂಡಿಸುತ್ತಾರೆ ಮುಖ್ಯಶಿಕ್ಷಕ ಕೃಷ್ಣ ಶೆಟ್ಟಿ, ಸಹ ಶಿಕ್ಷಕರಾದ ಸೋಮಶೇಖರಪ್ಪ ಮತ್ತು ಧನಂಜಯ ಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT