ಮಂಗಳವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿ ದುಗ್ಗಪ್ಪಗೌಡ ಅವರ ವಿರುದ್ಧ ಭೂ ವಿವಾದ ಸೃಷ್ಟಿಸಲಾಗಿದೆ. ದುಗ್ಗಪ್ಪಗೌಡ ಅವರ ಕುಟುಂಬದವರು ಮನೆಯಿಂದ ಹೊರಗೆ ಬರದಂತೆ ಬೇಲಿ ಹಾಕಿ ದಿಗ್ಭಂಧನ ವಿಧಿಸಲಾಗಿದೆ. ವಿವಾದಿತ ಭೂಮಿಯ ವಿಚಾರವು ನ್ಯಾಯಾಲಯದಲ್ಲಿದ್ದು, ತೀರ್ಪಿನ ಮೊದಲೇ ಅಕ್ರಮವಾಗಿ ವಿವಾದಿತ ಭೂಮಿಯೊಳಗೆ ಪ್ರವೇಶಿಸಿ, ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಲಾಗಿದೆ. ಈ ಭೂಮಿಗೆ ಸಂಬಂಧಿಸಿದಂತೆ ದುಗ್ಗಪ್ಪಗೌಡ ಅವರ ಕುಟುಂಬವು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ, ಇದುವರೆಗೂ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿಲ್ಲ. ಕೂಡಲೇ ತಾಲ್ಲೂಕು ಆಡಳಿತವು ಪರಿಶೀಲನೆ ನಡೆಸಿ ನ್ಯಾಯಪರವಾಗಿ ಕೆಲಸ ಮಾಡಬೇಕು. ದುಗ್ಗಪ್ಪ ಗೌಡ ಅವರು ಪ್ರಾಣ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಯಾರ ಮೇಲೆಯೂ ಗುಂಡು ಹಾರಿಸಿಲ್ಲ’ ಎಂದರು.