ಚಿಕ್ಕಮಗಳೂರು: ನಗರದಲ್ಲಿ ‘ರ್ಯಾಲಿ ಆಫ್ ಚಿಕ್ಕಮಗಳೂರು’ ಸ್ಪರ್ಧೆಗೆ ಶುಕ್ರವಾರ ಚಾಲನೆ ನೀಡಲಾಯಿತು.
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಅವರು ಸಿರಿ ನೇಚರ್ ರೂಟ್ಸ್ ಆವರಣದಲ್ಲಿ ರ್ಯಾಲಿಗೆ ಹಸಿರು ನಿಶಾನೆ ತೋರಿದರು. ಚಿಕ್ಕಮಗಳೂರು ಸುತ್ತಲಿನ ಪ್ರದೇಶದಲ್ಲಿ, ಎರಡು ಹಂತದಲ್ಲಿ (ಲೆಗ್ 1 ಮತ್ತು 2 ) ರ್ಯಾಲಿ ನಡೆಯಲಿದೆ
ಮೊದಲ ಹಂತದಲ್ಲಿ ಸರಿ ನೇಚರ್ ರೂಟ್ಸ್– ಖಾಂಡ್ಯಾ– ಚಿಕ್ಕಮಗಳೂರು ಮಾರ್ಗ ನಿಗದಿಪಡಿಸಲಾಗಿದೆ. ಒಟ್ಟು 180 ಕಿ.ಮೀ ಕ್ರಮಿಸಬೇಕಿದೆ. ಲೆಗ್– 2 ಹಂತ ಶನಿವಾರ ನಡೆಯಲಿದೆ. ಈ ಹಂತದಲ್ಲಿ 50 ಕಿ.ಮೀ ಕ್ರಮಿಸಬೇಕಿದೆ. ಒಟ್ಟು ಏಳು ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ.
‘ದೆಹಲಿ, ಮುಂಬೈ, ಈರೋಡ್, ಬೆಂಗಳೂರು, ಮಂಗಳೂರು, ಮತ್ತು ಸ್ಥಳೀಯರು ಸಹಿತ ಒಟ್ಟು 30 ಸ್ಪರ್ಧಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ’ ಎಂದು ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್ (ಎಂಎಸ್ಸಿಸಿ) ಉಪಾಧ್ಯಕ್ಷ ಫಾರೂಕ್ ತಿಳಿಸಿದರು.
‘ಟೈಪ್ ಸ್ಪೀಡ್ ಡಿಸ್ಟೆನ್ಸ್ (ಟಿಎಸ್ಡಿ) ರೂಪದಲ್ಲಿ ಈ ರ್ಯಾಲಿ ನಡೆಯುತ್ತದೆ. ಲೆಕ್ಕಾಚಾರ, ನಿಖರ ಚಾಲನೆ ಮಾಡುವುದು ಮುಖ್ಯ. ಇದೊಂದು ಸಾಹಸ ರ್ಯಾಲಿ’ ಎಂದು ಸ್ಪರ್ಧಿಗಳಾದ ಕಾಶಿಪ್ರಸಾದ್, ನಿಖಿತಾ ಪ್ರಸಾದ್ ಹೇಳಿದರು.