‘ಕರಾವಳಿ– ಮಲೆನಾಡಿಗೆ ಪ್ರತ್ಯೇಕ ಪ್ರಣಾಳಿಕೆ’: ಡಿ.ಕೆ.ಶಿವಕುಮಾರ
ಚಿಕ್ಕಮಗಳೂರು: ಮಲೆನಾಡು ಮತ್ತು ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ರೂಪಿಸುತ್ತೇವೆ. ಈ ಭಾಗಕ್ಕೆ ಆದ್ಯತೆ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಬೇಲೂರು ರಸ್ತೆಯ ಆಶ್ರಯ ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ಭಾಗದ ನಾಯಕರೊಂದಿಗೆ ಚರ್ಚಿಸಿ ಪ್ರಣಾಳಿಕೆ ರೂಪಿಸುತ್ತೇವೆ. ಅಭಿವೃದ್ಧಿ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ’ ಎಂದರು.
ಆಡಳಿತ ಚುಕ್ಕಾಣಿ ಹಿಡಿದರೆ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ, ಕುಟುಂಬಬದ ಯಜಮಾನ್ತಿಗೆ ಮಾಸಿಕ ₹ 2 ಸಾವಿರ, ಅನ್ನಭಾಗ್ಯದಡಿ ₹ 10 ಕೆ.ಜಿ ಅಕ್ಕಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಇವಿಷ್ಟೇ ಅಲ್ಲ ಇನ್ನಷ್ಟು ಕೊಡುಗೆಗಳು ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು.
ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಪಿಎಸ್ಐ ನೇಮಕಾತಿ, ವರ್ಗಾವಣೆ ಮೊದಲಾದ ಹಗರಣದಲ್ಲಿ ತೊಡಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನೇ ಕೇಳಿದರೆ ಏನೂ ನಡೆದೇ ಇಲ್ಲ ಎಂದು ಹೇಳುತ್ತಾರೆ ಎಂದು ದೂರಿದರು.
‘ನಾನು ಇಂಧನ ಸಚಿವನಾಗಿದ್ದಾಗ ವಿವಿಧ ಹುದ್ದೆಗಳಿಗೆ 25 ಸಾವಿರ ಮಂದಿ ನೇಮಕಾತಿ ನಡೆದಿದೆ. ಒಬ್ಬರೇ ಒಬ್ಬರಿಂದ ಹಣ ತೆಗೆದುಕೊಂಡಿದ್ದೇನೆ ಎಂದು ಸಾಬೀತು ಪಡಿಸಿದರೆ ರಾಜಕಿಯ ನಿವೃತ್ತಿ ಪಡೆಯುತ್ತೇನೆ’ ಎಂದು ಸವಾಲು ಹಾಕಿದರು.
ರೈತರ ಆದಾಯ ದ್ವಿಗುಣಗೊಳಿಸುದಾಗಿ, ಕೃಷಿ ಉತ್ಪನ್ನಗಳಿಗೆ ಬೆಂಬಲ ನಿಗದಿಪಪಿಡುಸುವುದಾಗಿ ಬಿಜೆಪಿ ಹೇಳಿತ್ತು. ಈ ಡಬಲ್ ಎಂಜಿನ್ ಸರ್ಕಾರ ಯಾವುದನ್ನೂ ಮಾಡಿಲ್ಲ. ಬಿಜೆಪಿ ಸರ್ಕಾರುವ ಲಂಚ, ಭ್ರಷ್ಟ ಮತ್ತು ‘ಬಿ’ ರಿಪೋರ್ಟ್ ಸರ್ಕಾರ’ ಎಂದು ಟೀಕಿಸಿದರು.
ಮಲೆನಾಡಿನ ಜನರು ನಮಗೂ ಒಂದು ಅವಕಾಶ ಕೊಡಿ, ನಾನೂ ನಿಮ್ಮವನೇ ತಾನೇ? ನಿಮ್ಮೂರಿನಲ್ಲಿ ನೆಂಟಸ್ತನ ಮಾಡಿದ್ದೀನಿ ತಾನೇ? ನಮಗೂ ಆಶೀರ್ವಾದ ಮಾಡಿ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕೋರಿದರು.
ಕೋಟ್
ಟಿಕೆಟ್ ಇಲ್ಲದವರಿಗೆ ಒಂದೊಂದು ಸ್ಥಾನ ಕೊಡುತ್ತೇವೆ. ಪಕ್ಷವನ್ನು ಗೆಲ್ಲಿಸಬೇಕು. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷ ಹೇಳಿದಂತೆ ಕೇಳಿ, ಗೆಲುವಿಗೆ ಶ್ರಮಿಸಬೇಕು.
ಡಿ.ಕೆ.ಶಿವಕುಮಾರ್, ಅಧ್ಯಕ್ಷ, ಕೆಪಿಸಿಸಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.