ಕನಕರು ಒಮ್ಮೆ ತಮ್ಮ ಸ್ವಗ್ರಾಮದಿಂದ ಉಡುಪಿಗೆ ಪಾದಯಾತ್ರೆ ಮಾಡಿಕೊಂಡು ಹೋಗುತ್ತಿದ್ದ ವೇಳೆ ರಾತ್ರಿಯಾಯಿತು. ಅವರು ನಿಂತ ಸ್ಥಳ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕಲ್ಲುಬಂಡೆಗಳ ಪ್ರದೇಶ. ರಾತ್ರಿ ಆದಿಕೇಶವನಿಗೆ ಪೂಜೆ ಮಾಡಿ ನೈವೇದ್ಯ ಸಮರ್ಪಿಸಿದ ನಂತರವೇ ತಾವು ಪ್ರಸಾದ ಸ್ವೀಕರಿಸುವುದು ಅವರ ನಿತ್ಯ ಅಭ್ಯಾಸ. ಆದರೆ, ಪೂಜೆ ಮಾಡಲು ಬಯಲು ಸೀಮೆಯ ಪ್ರದೇಶದಲ್ಲಿ ತಮ್ಮ ಆರಾಧ್ಯದೈವ ಆದಿಕೇಶವ ಸ್ವಾಮಿಯ ಪ್ರತೀಕವಿರಲಿಲ್ಲ. ಒಂದೆಡೆ ಕುಳಿತು ತಮ್ಮ ಕುಲದೈವ ಆದಿಕೇಶವ ಸ್ವಾಮಿಯನ್ನು ಭಕ್ತಿಯಿಂದ ಕರೆದರು. ಭಕ್ತಪರಾಧೀನನಾದ ಆದಿಕೇಶವ ತಿರುಪತಿ ವೆಂಕಟರಮಣ ಸ್ವಾಮಿ ರೂಪದಲ್ಲಿ ಕನಕರ ಭಕ್ತಿಗೆ ಓಗೊಟ್ಟು ಅಲ್ಲಿದ್ದ ಬಂಡೆಯ ಮೇಲೆ ಮೂಡಿದರು. ಭಕ್ತಿಯಿಂದ ಕನಕರು ಪೂಜಿಸಿದರು. ಕರೆಗೆ ಓಡೋಡಿ ಬಂದ ತಿಮ್ಮಪ್ಪ ಕನಕರಾಯನೆಂದೇ ಪ್ರಸಿದ್ಧಿಯಾದ. ಅ ಬಂಡೆಗಳ ಸಮೂಹ ಕನಕರಾಯನ ಗುಡ್ಡ, ಕನಕಪ್ಪನ ಗುಡ್ಡವೆಂದೇ ಖ್ಯಾತಿ ಪಡೆಯಿತು ಎಂಬುದು ಇಲ್ಲಿನ ಬಗ್ಗೆ ಜನಜನಿತವಾಗಿರುವ ಮಾತು.