ತರೀಕೆರೆ: ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ತ್ಯಾಗದಬಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಎರಡು ದಿನದಿಂದ ಕಾಡಾನೆಗಳ ದಾಳಿ ವಿಪರೀತವಾಗಿದ್ದು, ಆಹಾರಕ್ಕಾಗಿ ತೋಟಗಳಿಗೆ ನುಗ್ಗುವ ಕಾಡಾನೆಗಳು ನೀರಿನ ಪೈಪ್, ಅಡಿಕೆ, ಕಾಫಿ ಬೆಳೆಯನ್ನು ಹಾಳುಗೆಡವುತ್ತಿವೆ.
ಕಾಡಾನೆ ಹಾವಳಿಯಿಂದ ರೈತರು ರಾತ್ರಿ ವೇಳೆ ಸಂಚಾರ ಮಾಡುವುದಕ್ಕೆ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ರೈತರ ದೂರಿನನ್ವಯ ಬುಧವಾರ ಸ್ಥಳಕ್ಕೆ ಆಗಮಿಸಿದ ಲಕ್ಕವಳ್ಳಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಪರಿಶೀಲನೆ ನಡೆಸಿ ಕಾಡಾನೆ ದಾಳಿ ತಪ್ಪಿಸಲು ಕಂದಕ ನಿರ್ಮಾಣ ಮಾಡಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು, ಬೆಳೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.
‘ಅರಣ್ಯ ಇಲಾಖೆಯು ಬೆಳೆ ಪರಿಹಾರವನ್ನು ವೈಜ್ಞಾನಿಕ ರೀತಿಯಲ್ಲಿ ನೀಡಬೇಕು. ಅರಣ್ಯದ ಗಡಿ ಭಾಗದಲ್ಲಿ ಕಂದಕ ನಿರ್ಮಾಣಕ್ಕಿಂತ ಸೋಲಾರ್ ಬೆಲಿ ನಿರ್ಮಾಣ ಮಾಡಬೇಕು’ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹಳಿಯೂರು ಸೋಮಶೇಖರಯ್ಯ ಆಗ್ರಹಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿ ಮಾರುತಿ ಬಾಬು, ಸಚ್ಚಿನ್ ರಾಮಪ್ಪ, ತಿಮ್ಮರಾಜ್, ಗ್ರಾಮಸ್ಥರಾದ ಸುನಿಲ್, ರಘು, ಮಹೇಶ್, ಪ್ರಮೋದ್ ಇದ್ದರು.