ಬೀರೂರು: ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ನಡೆದಿದ್ದ ಸರ ಅಪಹರಣ ಪ್ರಕರಣವನ್ನು ಬೀರೂರು ಪೊಲೀಸರು ಭೇದಿಸಿ, ಮೂವರನ್ನು ಬಂಧಿಸಿದ್ದಾರೆ.
ಬೀರೂರು ಪಟ್ಟಣದ ಪುಷ್ಪಾ ಎನ್ನುವವರು ನಡೆದು ಹೋಗುತ್ತಿರುವಾಗ ಪಲ್ಸರ್ ಬೈಕ್ನಲ್ಲಿ ಬಂದು ಸುಮಾರು ₹ 1.16 ಲಕ್ಷ ಮೌಲ್ಯದ 23 ಗ್ರಾಂನಷ್ಟು ಮಾಂಗಲ್ಯ ಸರ ಅಪಹರಿಸಿದ್ದ ಭದ್ರಾವತಿ ತಾಲ್ಲೂಕು ನರಸೀಪುರದ ನಾಗರಾಜ, ಭದ್ರಾವತಿಯ ವಿನಯ ಕುಮಾರ್ ಮತ್ತು ಸರ ಮಾರಾಟ ಮಾಡಲು ಸಹಕರಿಸಿದ ಶರತ್ ಎಂಬುವವರನ್ನು ಬಂಧಿಸಿರುವ ಪೊಲೀಸರು, ಅವರಿಂದ 1 ಚಿನ್ನದ ತಾಳಿ, 2 ಪದಕಗಳನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಎಂ.ಎಚ್. ಮತ್ತು ಎಎಸ್ಪಿ ಶ್ರುತಿ ಅವರ ನಿರ್ದೇಶನದಂತೆ ತರೀಕೆರೆ ಡಿವೈಎಸ್ಪಿ ರೇಣುಕಾಪ್ರಸಾದ್ ಬೀರೂರು ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ರಚಿಸಿದ್ದರು. ಪಿಎಸ್ಐ ರಾಜಶೇಖರ್ ಮತ್ತು ಅಪರಾಧ ವಿಭಾಗದ ಬಸವರಾಜಪ್ಪ ಅವರ ತಂಡವು ಬೀರೂರು ಹೊರವಲಯದ ರೈಲ್ವೆಗೇಟ್ ಬಳಿ ಇದ್ದ ಸಿಸಿಟಿವಿಯಲ್ಲಿ ಸೆರೆಹಿಡಿದಿದ್ದ ದೃಶ್ಯಗಳನ್ನು ಆಧರಿಸಿ ಭದ್ರಾವತಿಯಲ್ಲಿ ಸೋಮವಾರ ನಾಗರಾಜ್ ಮತ್ತು ವಿನಯ ಕುಮಾರನನ್ನು ಬಂಧಿಸಿದ್ದರು.
ಅಪಹರಿಸಿದ್ದ ಸರವನ್ನು ಶರತ್ನ ಮಾರುತಿ ಕಾರು ಮತ್ತು ಗುರುತಿನ ಚೀಟಿ ಬಳಸಿ ಶಿವಮೊಗ್ಗದ ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಮಾರಾಟ ಮಾಡಲಾಗಿತ್ತು. ಮಾಹಿತಿ ಅನ್ವಯ ಶರತ್ನನ್ನು ಕೂಡಾ ವಶಕ್ಕೆ ಪಡೆದ ಪೊಲೀಸರು, ಕೃತ್ಯ ನಡೆಸಲು ಬಳಸಿದ್ದ ವಾಹನಗಳನ್ನೂ ವಶಕ್ಕೆ ಪಡೆದಿದ್ದಾರೆ. ಮಾರಾಟ ಮಾಡಲಾಗಿರುವ ಸರವನ್ನು ಇನ್ನೂ ಸುಪರ್ದಿಗೆ ಪಡೆಯಬೇಕಿದೆ.
ಪಿಎಸ್ಐ ಕಿರಣ್ ಕುಮಾರ್, ಠಾಣಾ ಸಿಬ್ಬಂದಿಯಾದ ಜಿ.ಎಂ.ಶಿವಕುಮಾರ್, ಡಿ.ವಿ.ಹೇಮಂತ ಕುಮಾರ್, ಬಿ.ಜಿ.ಮಧು, ಸಿ.ಶಿವಕುಮಾರ್, ರಾಜಶೇಖರ ಮೂರ್ತಿ, ರಾಘವೇಂದ್ರ, ರಘು, ಮಧು ಮತ್ತು ಅಶೋಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.