ಚಿಕ್ಕಮಗಳೂರು: ದತ್ತ ಜಯಂತಿ ನಡೆಯುವುದರಿಂದ ಮುಳ್ಳಯ್ಯನಗಿರಿ ಸುತ್ತಮುತ್ತಲ ಪ್ರದೇಶಗಳಿಗೆ ಬೇರೆ ಪ್ರವಾಸಿಗರ ಭೇಟಿಯನ್ನು ಡಿ.22ರಿಂದ 27ರವರೆಗೆ ಆರು ದಿನ ಜಿಲ್ಲಾಡಳಿತ ನಿರ್ಬಂಧಿಸಿದೆ.
ಡಿ.24ರಿಂದ 26ರವರೆಗೆ ಮೂರು ದಿನ ದತ್ತ ಜಯಂತಿ ಕಾರ್ಯಕ್ರಮಗಳು ನಡೆಯಲಿವೆ. ಜಿಲ್ಲೆಯ ವಿವಿಧೆಡೆ ಮತ್ತು ಹೊರ ಜಿಲ್ಲೆಗಳಿಂದ ಸಾವಿರಾರು ಮಾಲಧಾರಿ ಭಕ್ತರು ಬರುವುದರಿಂದ ಇನಾಂ ದತ್ತಾತ್ರೇಯ ಬಾಬಾಬುಡನಗಿರಿಸ್ವಾಮಿ ದರ್ಗಾ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ, ಝರಿ ಜಲಪಾತ, ಮಾಣಿಕ್ಯಧಾರಾ ಜಲಪಾತ ಹಾಗೂ ಗಾಳಿಕೆರೆಗೆ ಬೇರೆ ಪ್ರವಾಸಿಗರು ಬರುವುದನ್ನು ನಿರ್ಬಂಧಿಸಲಾಗಿದೆ.
ಚಂದ್ರದ್ರೋಣ ಪರ್ವತದಲ್ಲಿ ರಸ್ತೆಗಳು ಕಿರಿದಾಗಿರುವುದರಿಂದ ಬೇರೆ ಪ್ರವಾಸಿಗರು ತಮ್ಮ ಪ್ರವಾಸದ ದಿನಾಂಕಗಳನ್ನು ಮುಂದೂಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.