ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಶುರುವಾಗಿದ್ದರೂ, ಮಾರುಕಟ್ಟೆಗೆ ತರಕಾರಿ ಆವಕದಲ್ಲಿ ಹೆಚ್ಚಳವಾಗಿಲ್ಲ. ಕಳೆದ ವಾರಕ್ಕೆ ಹೋಲಿಸಿದರೆ ಬೆಲೆ ಏರುಗತಿಯಲ್ಲೇ ಇದೆ. ಬೀನ್ಸ್ ದರ ಕೆ.ಜಿಗೆ ₹100ರ ಗಡಿ ದಾಟಿದೆ. ಆದರೆ,ಹಿರೇಕಾಯಿ ದರ ಕೆ.ಜಿ.ಗೆ ₹ 8 ಕ್ಕೆ ಕುಸಿದಿದೆ.
ಬಿಸಿಲಿನ ತಾಪದಿಂದ ತರಕಾರಿ ಇಳುವರಿ ಕಡಿಮೆಯಾಗಿದೆ. ಬೆಲೆಯಲ್ಲಿಯೂ ಸಾಕಷ್ಟು ಏರುಪೇರು ಕಂಡಿದೆ. ಇತರ ತರಕಾರಿಗಳಿಗೆ ಹೋಲಿಸಿದದರೆ ಹಿರೇಕಾಯಿ ಬೆಳೆ ಜಾಸ್ತಿ ಇದೆ. ಮಾರುಕಟ್ಟೆ ಹೆಚ್ಚು ಪೂರೈಕೆಯಾಗುತ್ತಿರುವುದರಿಂದ ದರ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಚಿಲ್ಲರೆ ಮಾರುಕಟ್ಟೆಯಲ್ಲಿ ಬೀನ್ಸ್ ಕೆ.ಜಿಗೆ ₹100, ಬಟಾಣಿ ₹ 200, ಆಲೂಗಡ್ಡೆ ₹25, ಟೊಮೆಟೊ: ₹30, ಈರುಳ್ಳಿ (ದಪ್ಪ): ₹20 (ಸಣ್ಣದು), ₹14 ದರ ಇದೆ. ಹಿರೇಕಾಯಿ: ₹ 30, ಕ್ಯಾರೆಟ್: ₹ 60, ಕ್ಯಾಪ್ಸಿಕಂ: ₹ 60, ಸಾಂಬರ್ ಸೌತೆ: ₹ 30, ಹಸಿರುಮೆಣಸಿನಕಾಯಿ ₹40, ಬೀಟ್ರೂಟ್ ₹40 ದರ ಇದೆ.
ನುಗ್ಗೇಕಾಯಿ ಕೆ.ಜಿಗೆ ₹60, ಬದನೆಕಾಯಿ (ದುಂಡು)₹40, ಉದ್ದ ₹60, ಗೆಣಸು ಕೆ.ಜಿಗೆ ₹60 ಇದೆ. ಮಳೆ ಕಾರಣ ಸೊಪ್ಪಿನ ದರದಲ್ಲಿ ಏರಿಕೆಯಾಗಿದೆ. ಪಾಲಕ್, ಸೊಪ್ಪುಸೀಗೆ, ಕೊತ್ತಂಬರಿ, ಕರಿಬೇವು ಪ್ರತಿ ಕಟ್ಟಿಗೆ ₹10 ದರ ಇದೆ.
ಜಮೀನಿನಲ್ಲಿ ಸ್ವಂತ ಬೋರ್ ಇಲ್ಲ. ಕಾಲುವೆ ನೀರು ಹಾಯಿಸಿ ಬೀನ್ಸ್, ಮೆಣಸಿನಕಾಯಿ, ಸೊಪ್ಪು ಮೊದಲಾದ ತರಕಾರಿ ಬೆಳೆದಿದ್ದೇನೆ. ಬಿಸಿಲಿನ ತಾಪಕ್ಕೆ ಈ ಬಾರಿ ಇಳುವರಿ ಕಡಿಮೆಯಾಗಿದೆ. ಆದರೆ ಮಾರುಕಟ್ಟೆಯಲ್ಲಿ ಧಾರಣೆ ಪರವಾಗಿಲ್ಲ ಎಂದು ನಾರಾಯಣಪುರದ ಬೆಳೆಗಾರ ಬಸವಯ್ಯ ತಿಳಿಸಿದರು.
- ಇಳುವರಿ ಆಧರಿಸಿ ಬೆಲೆ ಏರಿಳಿತ ಇಳುವರಿ ಪ್ರಮಾಣ ಹೆಚ್ಚಾದಾಗ ಬೆಲೆಯಲ್ಲಿಯೂ ಏರುಪೇರಾಗುತ್ತದೆ. ಕೇರಳ ಮಂಗಳೂರು ಉಡುಪಿ ಸಹಿತ ವಿವಿಧೆಡೆಗಳಿಗೆ ಇಲ್ಲಿಂದ ತರಕಾರಿ ರವಾನೆಯಾಗುತ್ತದೆ ಎಂದು ಎಂ.ಎಸ್.ಎನ್ ವೆಜಿಟೇಬಲ್ ಮಳಿಗೆಯ ಸಗಟು ವ್ಯಾಪಾರಿ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.