ಚಿಕ್ಕಮಗಳೂರು: ಮುಸ್ಲಿಮರ ಕಟ್ಟಿಗೆ ಅಂಗಡಿಯಿಂದ ಹಲಾಲ್ ಮಾಂಸ ಖರೀದಿಸದಂತೆ ವಿಶ್ವ ಹಿಂದು ಪರಿಷತ್, ಬಜರಂಗ ದಳ ಸಂಘಟನೆಗಳವರು ಬುಧವಾರ ನಗರದಲ್ಲಿ ಕರಪತ್ರ ಹಂಚಿದರು.
ವಿಜಯಪುರ, ಶಂಕರಪುರ, ಮಾರುಕಟ್ಟೆ ಪ್ರದೇಶ, ಮಲ್ಲಂದೂರು ರಸ್ತೆ ಸಹಿತ ವಿವಿಧೆಡೆ ಅಂಗಡಿ, ಮನೆಗಳಿಗೆ ತೆರಳಿ ಕರಪತ್ರ ಹಂಚಿದರು. ಮುಸ್ಲಿಮರ ಅಂಗಡಿಗಳಲ್ಲಿ ಮಾಂಸ ಖರೀದಿಸದಂತೆ ಮನವಿ ಮಾಡಿದರು.
‘ಮೂರು ಕಡೆ ಕರಪತ್ರಗಳನ್ನು ಹಂಚಿದ್ದೇವೆ. ನಗರದ ಎಲ್ಲ ಕಡೆ ಕರಪತ್ರಗಳನ್ನು ಹಂಚುತ್ತೇವೆ’ ಎಂದು ಬಜರಂಗದಳ ನಗರ ಸಂಚಾಲಕ ಶ್ಯಾಮ್ ವಿ. ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಕರಪತ್ರದಲ್ಲಿ ‘ಆತ್ಮೀಯ ಹಿಂದು ಬಾಂಧವರೇ, ಈ ಬಾರಿ ಯುಗಾದಿ ವರ್ಷದೊಡಕಿನ (ಹೊಸ ತಡಕು) ದಿನ ನಾವೆಲ್ಲರೂ ಒಂದು ಸಂಕಲ್ಪ ಮಾಡೋಣ. ಯಾರೊಬ್ಬರೂ ಮುಸ್ಲಿಮರ ಕಟ್ಟಿಗೆ ಅಂಗಡಿಯಿಂದ ಅವರು ಹಲಾಲ್ ಮಾಡಿರುವ ಮಾಂಸವನ್ನು ಖರೀದಿ ಮಾಡದಿರೋಣ. ಹಲಾಲ್ ಎಂದರೆ ಮುಸ್ಲಿಂ ವ್ಯಕ್ತಿ ತನ್ನ ದೇವರಾದ ಅಲ್ಲಾಹು ಹೆಸರಿನಲ್ಲಿ ನೈವೇದ್ಯ ಅರ್ಪಿಸಿ ನಂತರ ಮಾಂಸ ವಿತರಣೆ ಮಾಡುವುದು... ನಾವೆಲ್ಲಾ ಒಗ್ಗಟ್ಟಾಗಿ ನಮ್ಮ ಹಿಂದುಗಳ ಬಳಿಯೇ ಮಾಂಸವನ್ನು ಖರೀದಿಸಿ ನಮ್ಮವರಿಗೆ ಸಹಾಯ ಮಾಡೋಣ’ ಎಂದು ಮುದ್ರಿಸಲಾಗಿದೆ.